ಮಂಡ್ಯ: ನಂಜನಗೂಡು ಮೂಲದ ಯುವತಿಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಜರುಗಿದೆ.
ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ (22) ಮೃತಪಟ್ಟವರು.
ಬೂದನೂರು ಗ್ರಾಮದ ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆ ಬಳಿಗೆ ಶನಿವಾರ ಮಧ್ಯಾಹ್ನ ಯುವಕನೊಬ್ಬನೊಂದಿಗೆ ಬೈಕ್’ನಲ್ಲಿ ಬಂದ ಯುವತಿ ಕೆಲಕಾಲ ಕೆರೆಯ ಸ್ನಾನಘಟ್ಟದ ಬಳಿ ಮಾತುಕತೆಯಲ್ಲಿ ತೊಡಗಿದ್ದರು. ಕೆಲ ಹೊತ್ತಿನ ಬಳಿಕ ಯುವಕ ಅಲ್ಲಿಂದ ತೆರಳಿದ್ದು ಯುವತಿ ತನ್ನ ಬ್ಯಾಗು, ಚಪ್ಪಲಿ ಮುಂತಾದ ವಸ್ತುಗಳನ್ನು ಕೆರೆ ದಡದ ಮೇಲಿರಿಸಿ ಕೆರೆಗೆ ಹಾರಿದ್ದಾರೆ.
ಸಂಜೆ ಕೆರೆ ದಡದಲ್ಲಿದ್ದ ಬ್ಯಾಗು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶನಿವಾರ ರಾತ್ರಿ ಮೃತದೇಹಕ್ಕಾಗಿ ತಡಕಾಡಿದರೂ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಿಗ್ಗೆ ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮಂಡ್ಯ ಮಿಮ್ಸ್ ಅಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಯುವತಿಯ ಪೋಷಕರು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಚಾಂದಿನಿ ಗ್ರಾಮಕ್ಕೆ ಬಂದಿದ್ದರು.
ಊರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಪ್ರತಿಕ್ರಿಯಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.