ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಜಂಟಿಯಾಗಿ ನಡೆಸಿದ್ದ ಬೆಂಗಳೂರಿನ ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಎಚ್ ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
‘ಈ ದಿನ.ಕಾಂ’ ಸರಣಿ ತನಿಖಾ ವರದಿ ಪ್ರಕಟವಾದ ನಂತರ ಅಧಿಕಾರಿಗಳು ಲೋಕಾಯುಕ್ತ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿದ್ದರು. ಸೆ.21ರಂದು ಯಡಿಯೂರಪ್ಪ ಅವರು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡುತ್ತ ಕುಮಾರಸ್ವಾಮಿ ಅವರು, ‘ನನಗೆ ಲೋಕಾಯುಕ್ತ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ’ ಎಂದು ಹೇಳಿದ್ದರು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಹಗರಣ ಇದು ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟ ನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ! ಇಬ್ಬರು ಬೇರೆ ಬೇರೆ ಅವಧಿಯಲ್ಲಿ ಸಿಎಂಗಳಾಗಿದ್ದವರು. ಆದರೆ, ಪಕ್ಷ ಬೇರೆ, ಹಗರಣ ಒಂದೇ FIR ಕೂಡ ಒಂದೇ ಸರ್ಕಾರಿ ಸ್ವತ್ತನ್ನು ಲೂಟಿ ಹೊಡೆಯುವ ಒಳಸಂಚಿನಲ್ಲಿ ಇಬ್ಬರೂ ಭಾಗಿಯಾಗಿ IPC Sec 120 (8) Criminal Conspiracy ಅಪರಾಧಿಕ ಒಳಸಂಚು ಕೇಸನ್ನು ಎದುರಿಸುತ್ತಿದ್ದಾರೆ.
ಈ ದಿನ.ಕಾಂ ತನಿಖಾ ತಂಡ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬೆನ್ನುಹತ್ತಿ ವರ್ಷಗಟ್ಟಲೆ ಪರಿಶ್ರಮ ಹಾಕಿದೆ ನಿರಂತರ ಪ್ರಯತ್ನಗಳ ಮೂಲಕ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಈ ರೆಡ್ ಹ್ಯಾಂಡ್ ಕ್ರೈಮ್ ನ ಕಟುವಾಸ್ತವಗಳನ್ನು Exclusive ದಾಖಲೆಗಳ ಸಮೇತ ಜನರ ಮುಂದಿಟ್ಟಿತ್ತು.