ಹೆಣ್ಣು ಮಕ್ಕಳು ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ಯವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರ್ನಾಟಕ ರಾಜ್ಯ ಕರಾಟೆ ಸಂಘ ಆಯೋಜಿಸಿದ್ದ ರಕ್ಷಾ ಸ್ವರಕ್ಷಣೆ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರುಸ್ಲಿ ಹೇಳಿರುವಂತೆ ‘ಬಿ ಲೈಕ್ ಎ ವಾಟರ್ ‘ ಅಂದರೆ ನಾವು ನೀರಿನಂತೆ ಇರಬೇಕು. ನೀರು ಹರಿಯುವ ಸಂದರ್ಭದಲ್ಲಿ ಹಲವಾರು ತೊಡಕುಗಳನ್ನು ಲೆಕ್ಕಿಸದೆ ಹರಿಯುತ್ತದೆ, ಅದೇ ರೀತಿ ನಾವು ಸಹ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಇದಕ್ಕೆ ಸನ್ನದ್ಧರಾಗಲು ಹೆಣ್ಣು ಮಕ್ಕಳು ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ಸದೃಢವಾಗಿರಬೇಕು. ಎಷ್ಟೇ ಅಡೆತಡೆಗಳು ಬಂದರೂ ಎದುರಿಸಿ ಮುನ್ನುಗ್ಗುವ ಛಲವಿರಬೇಕು. ಜೀವನದಲ್ಲಿ ನಿಗದಿ ಮಾಡಿಕೊಂಡಿರುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅಭ್ಯಾಸಗಳನ್ನು ನಡೆಸಬೇಕು ಎಂದರು.
ಗೌರವಯುತ ಜೀವನಕ್ಕೆ ಮೌಲ್ಯಗಳು ಅತ್ಯಗತ್ಯವಾಗಿದ್ದು, ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಹಂತದಲ್ಲೇ ರೂಢಿಸಿಕೊಂಡು ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.