ಕಲಬುರಗಿಯಲ್ಲಿ ನಗರದ ಸೂಪರ್ ಮಾರ್ಕೆಟ್ ಬಳಿ ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದು ಜನರನ್ನು ಹೆದರಿಸುತ್ತಿದ್ದ. ಈ ವೇಳೆ ಆತನನ್ನು ಬಂಧಿಸಲು ಬಂದ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಅಬ್ದುಲ್ ಜಾಫರ್ ಸಾಬ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಬ್ದುಲ್ ಜಾಫರ್ ಸುಮಾರು ಒಂದು ಗಂಟೆ ಕಾಲ ಕೈಯಲ್ಲಿ ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ತಿರುಗಾಡಿದ್ದಾನೆ. ಈ ಮೂಲಕ ಜನರಲ್ಲಿ ಭೀತಿ ಉಂಟುಮಾಡಿದ್ದಾನೆ. ಆತನನ್ನು ತಡೆಯಲು ಬಂದ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಪೊಲೀಸರು ಗುಂಡು ಹಾರಿದ್ದಾರೆ ಎಂದು ತಿಳಿದು ಬಂದಿದೆ.
ಶರಣಾಗುವಂತೆ ಸೂಚಿಸಿದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ, ಪಿಎಸ್ಐ ವಾಹಿದ್ ಕೊತ್ವಾಲ್ ಅವರು ಆರೋಪಿಯತ್ತ ಮೂರು ಸುತ್ತು ಗುಂಡು ಹಾರಿಸಿದರು. ಕೊನೆಯ ಗುಂಡು ಆತನ ಕಾಲಿಗೆ ಬಡಿದಿದ್ದರಿಂದ ಕೆಳಗೆ ಬಿದ್ದಿದ್ದಾನೆ. ಬಳಿಕ ಆತನನ್ನು ಸುತ್ತುವರೆದ ಪೊಲೀಸರು ಆತನಿಗೆ ಥಳಿಸಿದ್ದಾರೆ ಮತ್ತು ಬಂಧಿಸಿದ್ದಾರೆ.
“ಅಷ್ಟು ಮಂದಿ ಪೊಲೀಸರಿದ್ದು ಗುಂಡು ಹೊಡೆಯದೆ ಆತನನ್ನು ಸೆರೆ ಹಿಡಿಯುವುದು ಕಷ್ಟವಾಗಿತ್ತೆ! ಮೂರು ಗುಂಡು ಹಾರಿಸಿದ್ದಾರೆ! ಅಷ್ಟು ಅಪಾಯಕಾರಿಯೇ ಆ ವ್ಯಕ್ತಿ? ಅಷ್ಟು ಜನನಿಬಿಡ ರಸ್ತೆಯಲ್ಲಿ ಗುಂಡು ಹಾರಿಸಿ ಯಾವ ಪೌರುಷ ತೋರಿಸಲು ಹೊರಟಿದ್ದರೋ ಪೊಲೀಸರು!!” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.