ಯಡಿಯೂರಪ್ಪ ಕಣ್ಣೀರಿನಿಂದ ವಿದಾಯ ಹೇಳಿದ ದಿನವೇ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಾಗಿತ್ತು.
ರಾಜ್ಯದಲ್ಲಿ ಬಿಜೆಪಿ ಪಕ್ಷದ ತೆಕ್ಕೆಗೆ ಪ್ರಬಲ ಲಿಂಗಾಯತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಸಿದ್ದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರು ಅವರಿಗೆ ಕಣ್ಣೀರು ಹಾಕಿಸಿದ್ದರು.
ಯಡಿಯೂರಪ್ಪ ಅವರು ಕಣ್ಣೀರಿನ ವಿದಾಯ ಹೇಳಿದ ದಿನವೇ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ನಾಯಕರ ಮೇಲೆ ಆಕ್ರೋಶ ಗೊಂಡಿತ್ತು.ಯಡಿಯೂರಪ್ಪ ಕೆಳಗಿಳಿಯಲು ಬಿಜೆಪಿಯ ಸ್ವಯಂಘೋಷಿತ ರಿಂಗ್ ಮಾಸ್ಟರ್ ಬಿ.ಎಲ್.ಸಂತೋಷ್ ಕಾರಣ ಎಂದು ಲಿಂಗಾಯತ ಸಮುದಾಯದ ಸಿಟ್ಟು ಮಾಡಿಕೊಂಡಿತ್ತು.ಅಲ್ಲದೆ ಸಿಎಂ ರೇಸಿನಲ್ಲಿ ಬಿ.ಎಲ್. ಸಂತೋಷ್ ಹೆಸರು ಕೂಡಾ ಕಾಣಿಸಿತ್ತು.ಚುನಾವಣೆಗೆ ಎರಡು ವರ್ಷ ಇರುವಾಗ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಕೊಡದಿದ್ದರೆ ಬೇರೆ ಸಂದೇಶ ಹೋಗಿ ಮುಂದಿನ ಚುನಾವಣೆ ಗೆಲುವು ಕಷ್ಟ ಎಂದರಿತ ಕೇಂದ್ರ ಬಿಜೆಪಿ ನಾಯಕರು ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಕುರ್ಚಿ ಮೇಲೆ ಕೂರಿಸಿದರು.
ಆದರೆ ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ನಡೆಸಿದ ದುರಾಡಳಿತವನ್ನು ಲಿಂಗಾಯತ ಸಮುದಾಯಕ್ಕೆ ಸಿಟ್ಟು ತರಿಸಿತ್ತು.ಬಿಜೆಪಿಯಲ್ಲಿದ್ದರೂ ಎಂದಿಗೂ ಕೋಮು ಆಧಾರಿತ ರಾಜಕಾರಣ ಮಾಡದ ಯಡಿಯೂರಪ್ಪ ತನ್ನ ಅವಧಿಯಲ್ಲಿ ಯಾವುದೇ ಕೋಮುವಾದಿ ಚಟುವಟಿಕೆಗಳಿಗೆ ಆಸ್ಪದ ಕೊಟ್ಟಿರಲಿಲ್ಲ.ಆದರೆ ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಕೋಮುವಾದಿ ರಾಜಕಾರಣ ಮುನ್ನಲೆಗೆ ಬಂದಿತು.ಹಿಜಾಬ್,ಆಜಾನ್,ಮುಸ್ಲಿಂ ಸಮುದಾಯದ ಕಡೆಗಣನೆ,ಮುಸ್ಲಿಮರ ಮೀಸಲಾತಿ ಕಿತ್ತು ಕೊಂಡಿದ್ದು, ಮತಾಂತರ ನೀಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಮೊದಲಾದ ಕೋಮುವಾದಿ ಅಜೆಂಡಾಗಳನ್ನು ಜಾರಿಗೆ ತಂದಿತು.ಅಲ್ಲದೆ ಬಿ.ಎಲ್.ಸಂತೋಷ್ ಸಭೆಯೊಂದರಲ್ಲಿ ಲಿಂಗಾಯತ ಸಮುದಾಯ ಕಡೆಗಣಿಸಿ ಮಾತನಾಡಿದ್ದು ಕೂಡ,ಕಾಂಗ್ರೆಸ್ ಪಕ್ಷದತ್ತ ವಾಲುವಂತೆ ಮಾಡಿತು.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರೇ ಲಿಂಗಾಯತ ಸಮುದಾಯದ ನಾಯಕ ಎಂಬುದು ಗೊತ್ತಿದ್ದರೂ, ಅವರನ್ನು ಕಾಟಾಚಾರಕ್ಕೆ ಎಂಬಂತೆ ಕೇವಲ ಚುನಾವಣೆಗೋಸ್ಕರ ಅವರಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್ ನಾಯಕರ ಕುತಂತ್ರವನ್ನು ಅರಿತ ಲಿಂಗಾಯತ ಸಮುದಾಯದ ಕಾಂಗ್ರೆಸ್ ಕಡೆ ನಿಲ್ಲುವ ಮೂಲಕ ಬಿಜೆಪಿಗೆ ಮರ್ಮಾಘಾತ ನೀಡಿತು.