ಸವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕದ ಪರ ಬರಲು ಎಂದು ಪ್ರಾರ್ಥಿಸಿ ಮಂಡ್ಯದಲ್ಲಿರುವ ಕಾವೇರಿ ಪ್ರತಿಮೆಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಮೊಸರು, ಕುಂಕುಮ ಅಭಿಷೇಕಗಳನ್ನು ಕರ್ನಾಟಕ ಜನಪರ ವೇದಿಕೆ ವತಿಯಿದ ನೆರವೇರಿಸಲಾಯಿತು.
ಕಾವೇರಿ ಕೊಳ್ಳದ ಕೆ ಆರ್ ಎಸ್ ಮತ್ತು ಕಬಿನಿ ಜಲಾಶಯದ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿದ್ದರೂ, ಇಂದಿಗೂ ಸಹ ಪ್ರತಿನಿತ್ಯ ನೀರು ಬಿಡುಗಡೆ ಮಾಡುತ್ತಿದೆ, ಇದ್ದ ನೀರೆಲ್ಲ ಖಾಲಿಯಾಗುತ್ತಿದೆ, ಆಳುವ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳ ಮೇಲೆ ಇಟ್ಟಿದ್ದ ನಂಬಿಕೆ ಸಂಪೂರ್ಣ ಹುಸಿಯಾಗಿರುವುದರಿಂದ ನಮಗೆ ಕಾವೇರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ, ಕಾವೇರಿ ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾಸ್ತವ ವಿಚಾರ ಮಂಡನೆ ಮಾಡುವಲ್ಲಿ ವಿಫಲವಾಗಿದೆ, ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ವಾಸ್ತವ ಮನವರಿಕೆ ಮಾಡಿಕೊಡಲು ಮುಂದಾಗ ಬೇಕಾಗಿದೆ, ರಾಜ್ಯದ ಸಂಸದರು ಮತ್ತು ಶಾಸಕರು ದನಿ ಎತ್ತುತ್ತಿಲ್ಲ, ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದ್ದರೂ ಹೋರಾಟ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಆಳುವ ಸರ್ಕಾರ ನ್ಯಾಯ ಕೊಡಿಸುವ ಬದಲಾಗಿ ನೀರು ಬಿಡುವುದನ್ನು ಕಾಯಕ ಮಾಡಿಕೊಂಡಿದೆ, ಬರ ಪರಿಸ್ಥಿತಿ ತಲೆದೂರಿದೆ, ಜಲಾಶಯಗಳು ಬರಿದಾಗಿವೆ. ರೈತರ ಬೆಳೆ ನೀರಿಲ್ಲದೆ ಒಣಗುತ್ತಿವೆ, ಹೊಸ ಬೆಳೆ ನಾಟಿ ಮಾಡಲು ನೀರಿಲ್ಲದಂತಾಗಿದೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪರಿಸ್ಥಿತಿ ತಂದೊಡ್ಡಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಜಿಲ್ಲಾಧ್ಯಕ್ಷ ಉಮಾಶಂಕರ್, ರಾಜ್ಯ ಉಪಾಧ್ಯಕ್ಷ ರಂಜಿತ್ ಗೌಡ, ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ಮುಖಂಡರಾದ ಕೃಷ್ಣೆಗೌಡ, ಮಂಜು, ಅಜಯ್ ಧನಂಜಯ್, ನಿರ್ಮಲ, ಮಂಗಳ, ರಾಜಮ್ಮ ಉಪಸ್ಥಿತರಿದ್ದರು.