ಕಾಂಗ್ರೆಸ್ನ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಣಿಪುರದ ಇಂಫಾಲ್ ಪಶ್ಚಿಮದ ಸೆಕ್ಮಾಯ್ನಿಂದ ಇಂದಿನ ಯಾತ್ರೆ ಆರಂಭವಾಗಿದೆ. ಯಾತ್ರೆಯ ವೇಳೆ ತಮ್ಮನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಜತೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದು, ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 7.30ಕ್ಕೆ ಸೇವಾದಳದ ಧ್ವಾಜಾರೋಹಣ ಮಾಡುವ ಮೂಲಕ ಭಾರತ್ ಜೋಡೊ ನ್ಯಾಯ ಯಾತ್ರೆಯ 2ನೇ ದಿನವನ್ನು ಪ್ರಾರಂಭಿಸಲಾಯಿತು. ವಿಶೇಷವಾಗಿ ಸಿದ್ದಪಡಿಸಲಾಗಿರುವ ವೋಲ್ವೊ ಬಸ್ನಲ್ಲಿ ಯಾತ್ರೆ ನಡೆಯುತ್ತಿದ್ದು, ರಾಹುಲ್ ಗಾಂಧಿ ಜನರ ಕಷ್ಟಗಳನ್ನು ಆಲಿಸುತ್ತಾ ಯಾತ್ರೆಯಲ್ಲಿ ಸಾಗಿದ್ದಾರೆ. ಯಾತ್ರೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಯಾತ್ರೆಯು ಸೆಕ್ಮಾಯ್ಯಿಂದ ಕಂಗ್ಪೋಪ್ಕಿ, ಅಲ್ಲಿಂದ ಸೇನಾಪತಿವರೆಗೆ ಸಾಗಲಿದೆ. ರಾತ್ರಿ ನಾಗಾಲ್ಯಾಂಡ್ನಲ್ಲಿ ವಾಸ್ತವ್ಯ ಇರಲಿದ್ದಾರೆ.
ನಿನ್ನೆ ತೌಬಲ್ನ ಖೋಂಗ್ಜೋಮ್ನಲ್ಲಿರುವ ಮೈದಾನದಿಂದ ಯಾತ್ರೆ ಆರಂಭಿಸಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ, ಖರ್ಗೆ ಸೇರಿ ಕಾಂಗ್ರೆಸ್ ನಾಯಕರು ವಾಗ್ಧಾಳಿ ನಡೆಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯು 66 ದಿನಗಳು ನಡೆಯಲಿದೆ. 15 ರಾಜ್ಯಗಳಾದ್ಯಂತ 6,700 ಕಿಲೋಮೀಟರ್ಗಳನ್ನು ಕ್ರಮಿಸಲಿದೆ. ಮಾರ್ಚ್ ಮೂರನೇ ವಾರದಲ್ಲಿ ಯಾತ್ರೆ ಮುಂಬೈನಲ್ಲಿ ಕೊನೆಗೊಳ್ಳಲಿದೆ.
ದೇಶವು ದೊಡ್ಡ ಅನ್ಯಾಯವನ್ನು ಎದುರಿಸುತ್ತಿರುವ ಕಾರಣ ನಾವು ಯಾತ್ರೆಯನ್ನು ಕೈಗೊಳ್ಳಬೇಕಾಯಿತು ಎಂದು ಹೇಳಿದ ರಾಹುಲ್ ಗಾಂಧಿ, ಪಕ್ಷವು ಜನರ ‘ಮನ್ ಕಿ ಬಾತ್’ನ್ನು ಕೇಳಲು ಬಯಸುತ್ತದೆ. ಬಹುಶಃ ಬಿಜೆಪಿ ಮತ್ತು ಆರೆಸ್ಸೆಸ್ಸ್ಗೆ ಮಣಿಪುರ ಭಾರತದ ಭಾಗವಾಗಿಲ್ಲ. ‘ಲಕ್ಷಗಟ್ಟಲೆ ಜನರು ನಷ್ಟವನ್ನು ಎದುರಿಸಿದ್ದಾರೆ. ಆದರೆ, ನಿಮ್ಮ ಕಣ್ಣೀರು ಒರೆಸಲು ಪ್ರಧಾನಿ ಇಲ್ಲಿಗೆ ಬಂದಿಲ್ಲ, ನಿಮ್ಮ ಕೈ ಹಿಡಿದಿಲ್ಲ, ನಿಮ್ಮನ್ನು ಅಪ್ಪಿಕೊಳ್ಳಲಿಲ್ಲ, ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ಗೆ ಮಣಿಪುರ ಭಾರತದ ಭಾಗವಲ್ಲ. ನಿಮ್ಮ ನೋವು ಅವರ ನೋವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಈ ವೇಳೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಎಲ್ಲಾ ಭಾರತೀಯ ನಾಗರಿಕರ ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಯಾತ್ರೆಯನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ವೋ ಸಮಂದರ್ ಕೆ ಉಪರ್ ಸೈರ್ ಕರ್ತಾ ಫಿರ್ತಾ ಹೈ ಔರ್ ಬೈತೆ ಜಗಹ್ ಜಪ್ ಕರ್ತೆ ರೆಹತೇ ಹೇ ರಾಮ್ ರಾಮ್ (ಅವರು ಸಮುದ್ರದ ಮೇಲಿನ ಸೇತುವೆಯ ಮೇಲೆ ಪ್ರವಾಸ ಮಾಡುತ್ತಿರುವುದನ್ನು ಕಾಣಬಹುದು ಅಥವಾ ರಾಮ್ ರಾಮ್ ಎಂದು ಜಪಿಸುತ್ತಿರುವುದು ಕಂಡುಬರುತ್ತದೆ)’. ‘ಮುಖ್ ಮೇ ರಾಮ್, ಬಗಲ್ ಮೇ ಚೂರಿ, ಜನರೊಂದಿಗೆ ಹೀಗೆ ಮಾಡಬೇಡಿ… ಎಲ್ಲರಿಗೂ ದೇವರಲ್ಲಿ ನಂಬಿಕೆ ಇದೆ. ಆದರೆ ಮತಕ್ಕಾಗಿ ಇದನ್ನು ಮಾಡಬೇಡಿ… ಬಿಜೆಪಿಗರು ಜನರನ್ನು ಪ್ರಚೋದಿಸಲು ಧರ್ಮವನ್ನು ಬಳಸುತ್ತಾರೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದರು.