ಪಿ.ಎಫ್., ಇಎಸ್ಐ, ಪಿಂಚಣಿ, ವೈದ್ಯಕೀಯ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೃಹ ಕಾರ್ಮಿಕ ಮಹಿಳೆಯರು ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ, ಕರ್ನಾಟಕ ಗೃಹ ಕಾರ್ಮಿಕರ ಚಳವಳಿ ಮತ್ತು ಕೋನ್ ಫೆಡರೇಶನ್ ಆಫ್ ಫ್ರೀ ಟ್ರೇಡ್ ಯೂನಿಯನ್ಸ್ ಆಫ್ ಇಂಡಿಯ (ಸಿಎಫ್ಟಿಯುಐ) ಸಹಯೋಗದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಗೃಹ ಕಾರ್ಮಿಕ ಮಹಿಳೆಯರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು.
ಸಮಾಜದಲ್ಲಿ ಗೃಹ ಕಾರ್ಮಿಕರು ತುಳಿತಕ್ಕೊಳಗಾಗಿದ್ದು, ಸಾಮಾಜಿಕ ಭದ್ರತೆಯ ಪಿಎಫ್, ಇಎಸ್ಐ, ಪಿಂಚಣಿ, ವೈದ್ಯಕೀಯ ವಿಮೆ, ಮಾತೃತ್ವ ಸೌಲಭ್ಯಗಳಂತಹ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಇವರ ಜೀವನವನ್ನು ಉತ್ತಮಗೊಳಿಸಲ ಗೃಹ ಕಾರ್ಮಿಕರಿಗೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
- ಹಕ್ಕೊತ್ತಾಯಗಳು
ಗೃಹ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆಯ ಪಿಎಫ್, ಇಎಸ್ಐ, ಪಿಂಚಣಿ, ವೈದ್ಯಕೀಯ ವಿಮೆ ಮಾತೃತ್ವ ಸೌಲಭ್ಯ ಹಾಗೂ ವಿದ್ಯಾರ್ಥಿವೇತನವನ್ನು ನೀಡಬೇಕು.
- ಗೃಹ ಕಾರ್ಮಿಕರ ಯೋಗ್ಯ ಉದ್ಯೋಗಕ್ಕಾಗಿ ಐಎಲ್ಒ ಸಿ 189 ಇದನ್ನು ನಮ್ಮ ದೇಶ ಅನುಮೋದಿಸಬೇಕು.
- ಪ್ರತಿಯೊಬ್ಬ ಗೃಹಕಾರ್ಮಿಕರನ್ನು ಗುರುತಿಸಿ 60 ವರ್ಷ ಮೇಲ್ಪಟ್ಟ ಗೃಹ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಕಡ್ಡಾಯವಾಗಿ ನೀಡಬೇಕು.
- ನಮ್ಮ ರಾಜ್ಯ ನೀಡುತ್ತಿರುವ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿಯಾಗಿ ಉಳಿಯದೆ ಅದರೊಂದಿಗೆ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾರ್ಮಿಕ ಮಿತ್ರಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
- ಗೃಹಕಾರ್ಮಿಕರಿಗೆ ರಾಷ್ಟ್ರೀಯ ಶಾಸನ ರೂಪಿಸುವುದು. ಪಸ್ತುತ ಸಾಲಿನ ಕನಿಷ್ಟವೇತನವನ್ನು ಪರಿಷ್ಕರಿಸುವುದು, ಸರ್ಕಾರದ ಸೌಲಭ್ಯ ಪಡೆಯಲು ಕಡ್ಡಾಯ ಮಾಡಿರುವ ಆಹಾರ ಪಡಿತರ ಚೀಟಿಯನ್ನು ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸಬಾರದು. ಗೃಹ ಕಾರ್ಮಿಕರಿಗೆ ವಸತಿ ಕಲ್ಪಿಸ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ನಾಗಮ್ಮ, ಲಲಿತಾ, ಶೋಭಾ ಸೇರಿದಂತೆ ನೂರಾರು ಗೃಹ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು.