ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ನಿಗದಿಪಡಿಸಿಕೊಳ್ಳಬೇಕು ಹಾಗೂ ಅವರ ನಡೆ ಸದಾ ಗುರಿಯ ಕಡೆಯಲ್ಲೇ ಇರಬೇಕು. ಗುರಿ ಎಂದಿಗೂ ಅಳಿ ತಪ್ಪದ ರೀತಿಯಲ್ಲಿ ನೋಡಿಕೊಳ್ಳಿ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದರು.
ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಆರಕ್ಷಕ ಇಲಾಖೆ ಮತ್ತು ಅಬಕಾರಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಗೆ ಹೆಚ್ಚಾಗಿ ವಿದ್ಯಾರ್ಥಿಗಳೇ ದಾಸರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಮಾಡಿಕೊಳ್ಳುವ ಸ್ನೇಹಿತ ವರ್ಗ ಅಥವಾ ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸದೇ ಇರವುದು. ದೇಶದ ಮುಂದಿನ ಶಕ್ತಿಯಾಗಬೇಕಿರುವ ಯುವ ಜನತೆ ಇಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ಅದರಿಂದ ಸದಾ ದೂರವಿರಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನಗೆ ಮೊದಲ ಆದ್ಯತೆ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಮೂಲ್ಯ ಮನರಂಜನೆಗೆ ಸಣ್ಣ ಸಮಯ ಮೀಸಲಿಡಿ. ವಿದ್ಯಭ್ಯಾಸಕ್ಕೆ ಹೆಚ್ಚಿನ ಸಮಯ ನೀಡಿ. ಮಾದಕ ವಸ್ತುಗಳನ್ನು ಸೇವನೆ ಮಾಡಬೇಡಿ, ತಮ್ಮ ಸುತ್ತಮುತ್ತಲಿನನವರಿಗೂ ಸೇವನೆ ಮಾಡದಂತೆ ಅರಿವು ಮೂಡಿಸಿ. ಮಾದಕ ವಸ್ತುಗಳ ಅಕ್ರಮವಾಗಿ ಸಾಗಾಣಿಕೆ ಮಾಡುವುದು ಶಿಕ್ಷರ್ಹ ಅಪರಾಧ ಎಂದರು.
ಪ್ರಯೋಗಕ್ಕಾಗಿ ಮಾದಕ ವಸ್ತು ಸೇವಿಸುವವರೆ ಹೆಚ್ಚು
ಕುತೂಹಲ ಹಾಗೂ ಪ್ರಯೋಗಕ್ಕಾಗಿ ಮೊದಲ ಬಾರಿಗೆ ಮಾದಕ ವಸ್ತು ಸೇವನೆ ಮಾಡುವವರೇ ಹೆಚ್ಚು, ನಂತರ ಮಾದಕ ವಸ್ತುಗಳ ದಾಸರಾಗುತ್ತಾರೆ. ವಿದ್ಯಾರ್ಥಿಗಳೇ ಮಾದಕ ವಸ್ತುಗಳ ಜೊತೆ ಪ್ರಯೋಗ ಬೇಡ
ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ರವಿ ಶಂಕರ್ ಅವರು ಕಿವಿಮಾತು ಹೇಳಿದರು
ಕುಟುಂಬದಲ್ಲಿ ಕೆಲವು ಹಿರಿಯರು ಕೆಲಸ ಮಾಡಿ ಆಯಾಸವಾಗಿದೆ ಎಂದು ಮಾದಕ ವಸ್ತುಗಳ ಸೇವನೆ ಮಾಡುತ್ತರೆ.ಆದರೆ ಇದು ಮನೆಯಲ್ಲಿರುವ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳು ಸಹ ದುಶ್ಚಟಕ್ಕೆ ಬಲಿಯಾಗುತ್ತರೆ. ಇದನ್ನು ಅರ್ಥಮಾಡಿಕೊಂಡು ಪೋಷಕರು ಸದಾ ಮಕ್ಕಳಿಗೆ ಉತ್ತಮ ಅಭ್ಯಾಸ ರೂಡಿಸಿಸುವ ರೀತಿ ಮಾದರಿಯಾಗಿ ಎಂದರು.
ಕೆಲವು ಸಂದರ್ಭಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಣೆ ಸಂಭ್ರಮಿಸುವಾಗ ಮಾದಕ ವಸ್ತುಗಳ ಅಭ್ಯಾಸಕ್ಕೆ ದಾಸರಾಗುತ್ತಿದ್ದಾರೆ. ಹುಟ್ಟುಹಬ್ಬ ಅಥವಾ ಇನ್ನಿತರೆ ಸಂಭ್ರಮಯುತ ಕಾರ್ಯಕ್ರಮಗಳು ಮೌಲ್ಯಯುತ ಹಾಗೂ ಸಂತೋಷಮಯ ವಾಗಿರಲಿ. ಮಾದಕ ವಸ್ತುಗಳ ಸೇವನಾ ಕಾರ್ಯಕ್ರಮ ಮಾಡಬೇಡಿ ಒಂದು ಸಲ ಮಾದಕ ವಸ್ತುಗಳ ವ್ಯಸನರಾದರೆ ಅದರಿಂದ ಹೊರ ಬರುವುದಕ್ಕೆ ತುಂಬಾ ಕಷ್ಟ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿ.ವೈ.ಎಸ್.ಪಿ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಾಗೃತಿ ಜಾಥಾ
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣಿಕೆ ವಿರುದ್ಧ ಪೊಲೀಸ್ ಇಲಾಖೆ ವತಿಯಿಂದ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ನಡೆಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳು ಮಾದಕ ದ್ರವ್ಯ ಬಳಸದಂತೆ ಅರಿವು ಮೂಡಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.