ಹನಿಯಂಬಾಡಿ ಜಗದೀಶ್
ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಬುಧವಾರವೂ ಭಾರೀ ಮಳೆ ಆರ್ಭಟ ಮುಂದುವರಿದಿದೆ. ಕೆಲವು ದಿನಗಳಿಂದ ಬರುತ್ತಿರುವ ಅತ್ಯಧಿಕ ಮಳೆಯಿಂದಾಗಿ ಇಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಕೊಡಗಿನ ಬಹುತೇಕ ಭಾಗಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಇಲ್ಲಿ ಮುಂಗಾರು ಬಿರುಸುಗೊಂಡಿದ್ದು, ಇಂದು ಮತ್ತು ಗುರುವಾರ ಎರಡು ದಿನ ಕೊಡಗು ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಮಡಿಕೇರಿ ಇನ್ನಿತರ ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದು, ಇಲ್ಲಿಂದ ಬರುವ ನೀರು ಹಾರಂಗಿ ಜಲಾಶಯಕ್ಕೆ ಸೇರುತ್ತದೆ. ಅಲ್ಲಿನ ಒಳಹರಿವಿನ ಮಟ್ಟ 500 ಕ್ಯೂಸೆಕ್ ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರಪೇಟೆ ಯಲ್ಲಿ 20ಮಿ.ಮೀ. ಮಳೆ ಎರಡು ದಿನದಿಂದ ಜೋರು ಮಳೆ ಆಗಿದೆ. ಸೋಮವಾರಪೇಟೆಯಲ್ಲಿ 20 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇಲ್ಲಿ ಕಾವೇರಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಲೇ ಇದೆ. ಜನರು ಮನೆಯಿಂದ ಹೊರ ಬರದಂತಹ ಸ್ಥಿತಿ ಕೊಡಗು ಜಿಲ್ಲೆಯಾದ್ಯಂತ ನಿರ್ಮಾಣವಾಗಿದೆ.
#ದುಬಾರೆಯಲ್ಲಿ_ಕಾವೇರಿ_ನದಿಯ_ಇಂದಿನ_ನೀರಿನ_ಮಟ್ಟ (26-06-24) pic.twitter.com/k4XQwRgjJY
— Coorgthekashmirofkarnataka (@Coorgthekashmir) June 26, 2024
“>ಇಂದು ಬುಧವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಕೆಲವೆಡೆ ಸಾಧಾರಣ ಮಳೆ ಆದರೆ, ಇನ್ನೂ ಹಲವೆಡೆ ಭಾರೀ ಮಳೆ ಆಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮಳೆ ಆಗಲಿದ್ದು, ಶುಕ್ರವಾರದ ಹೊತ್ತಿಗೆ ಮಳೆ ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಒಂದೆರಡು ದಿನಗಳಲ್ಲಿ ಕೆ.ಆರ್.ಎಸ್ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಾಣುವ ನೀರಿಕ್ಷೆ ಇದೆ.
ಕೆ.ಆರ್.ಎಸ್ ಅಣೆಕಟ್ಟೆಯ ಇಂದಿನ (ಜೂ.26) ನೀರಿನ ಮಟ್ಟ
- ಗರಿಷ್ಟ ಮಟ್ಟ : 124.80 ಅಡಿ
- ಇಂದಿನ ಮಟ್ಟ :87.90 ಅಡಿ
- ಒಳಹರಿವು:2,241 ಕ್ಯೂಸೆಕ್
- ಹೊರ ಹರಿವು: 986 ಕ್ಯೂಸೆಕ್
ಕರಾವಳಿಯಲ್ಲಿ ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ನಾಳೆ ಭಾರೀ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ. ನಾಳೆ ಮಾತ್ರವಲ್ಲದೆ ಶುಕ್ರವಾರಕ್ಕೂ ಮಳೆ ಮುಂದುವರೆಯಲಿದೆ. ಸುಮಾರು 30 ತಾಸಿನ ಭಾರೀ ಮಳೆಗೆ ತಯಾರಾಗಲು ಈ ಜಿಲ್ಲೆಗಳ ಜನರಿಗೆ ಸೂಚಿಸಲಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಜೂ.27ರಂದು ರಜೆ ಘೋಷಿಸಲಾಗಿದೆ.
ಈ ನಡುವೆ ದಕ್ಷಿಣ ಒಳನಾಡಿನಲ್ಲೂ ಮುಂಗಾರು ಮಳೆಯ ಪ್ರಮಾಣ ಹೆಚ್ಚಿದ್ದು, ಕೊಡುಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಕುದುರೆಮುಖ ಸಮೀಪ ರಾಜ್ಯ ಹೆದ್ದಾರಿಗೆ ಬಿದ್ದ ಮರ ಕಾರಣ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಕಳಸ – ಮಂಗಳೂರು ರಸ್ತೆಯಲ್ಲೂ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು.
ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪದ ಬಲಮುರಿ ಪುರಾತನ ಸೇತುವೆ ಜಲಾವೃತಗೊಂಡಿದೆ.
ನಾಳೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಲಾಗಿದ್ದು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಹಾಸನ ಜಿಲ್ಲೆಗಳಿಗೆ ಎಲ್ಲೋ ಅಲೆರ್ಟ್ ಹೊರಡಿಸಲಾಗಿದೆ.