ರಾಜ್ಯದ ಕಾಂಗ್ರೆಸ್ ಸರ್ಕಾರ ಡೆಂಗ್ಯೂ ಕಾಯಿಲೆ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಮಂಡ್ಯ ನಗರಸಭೆ ಎದುರು ಔಷಧಿ ಸಂಪಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು
ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದ ಜನತೆಯು ಕೇವಲ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಸಾಯುವ ಪರಿಸ್ಥಿತಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಯಾವ ರಾಜ್ಯಗಳಲ್ಲಿಯೂ ಈ ರೀತಿಯ ದುರಂತ ನಡೆದಿಲ್ಲ, ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕಳೆದ 6 ತಿಂಗಳಿನ ಹಿಂದೆಯೇ ರಾಜ್ಯದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಆದರೆ, ಅದಕ್ಕೆ ಆರೋಗ್ಯ ಇಲಾಖೆಯಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.
ರಾಜ್ಯಾದ್ಯಂತ ಅಧಿಕೃತವಾಗಿ 8 ಸಾವಿರಕ್ಕೂ ಹೆಚ್ಚು ಮತ್ತು ಅಂದಾಜಿನ ಪ್ರಕಾರ 15 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಕಾಯಿಲೆಯಿಂದ ಸಾವು ಬದುಕಿನನಡುವೆ ರೋಗಿಗಳು ನರಳುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ 1800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ದಿನಕ್ಕೆ 250ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಅಂದಾಜು 10ಕ್ಕೂ ಹೆಚ್ಚು ಮಂದಿ ಡಂಪ್ಯೂ ಕಾರದಿಂದಾಗಿಯೇ ಮೃತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರು, ಬಿಳಿರಕ್ತಕಣಗಳು ಸಾಕಷ್ಟು ದೊರಕುತ್ತಿಲ್ಲ. ಬೆಂಗಳೂರಿನಲ್ಲಿ ಕುಡಿಯಲು ನೀರೇ ಇಲ್ಲದ ಸಮಯದಲ್ಲಿ ನಿಂತ ಕೊಳೆತ ನೀರಿನಿಂದ ಉತ್ಪತ್ತಿಯಾದ ಈ ಸೊಳ್ಳೆಗಳಿಂದಾದ ಸಮಸ್ಯೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಇಂತಹ ಬೇಜವಾಬ್ದಾರಿಯುತ ಸರ್ಕಾರದ ಆರೋಗ್ಯ ಇಲಾಖೆಯ ಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಡಾ.ಸದಾನಂದ, ಪರಮಾನಂದ, ಬಿ.ಕೃಷ್ಣ, ವಿವೇಕ್, ಮಂಜುನಾಥ್ ಮತ್ತಿತರರರು ಭಾಗವಹಿಸಿದ್ದರು.