ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 75,000 ಜನರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.
ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಮಹಾಲಯ ಅಮಾವಾಸ್ಯೆ ಹಬ್ಬದ ನಡುವೆಯೂ ಗುರುವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈವರೆಗೆ 6000ಕ್ಕೂ ಹೆಚ್ಚು ಮಂದಿಯನ್ನು ನೋಂದಾಯಿಸಲಾಗಿದೆ. ನಿರಂತರ ಕಾರ್ಯಕ್ರಮದ ಮೂಲಕ ಕಾಲಮಿತಿಯೊಳಗೆ ಸದಸ್ಯತ್ವ ನೊಂದಣಿಯಲ್ಲಿ ಗುರಿ ತಲುಪಲಾಗುವುದು ಎಂದು ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯು ತನ್ನದೇ ಆಸ್ತಿತ್ವ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗುತ್ತಿದೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲೂ ಪಕ್ಷವನ್ನು ಹೆಚ್ಚು ಸದೃಢಗೊಳಿಸಲು ಶ್ರಮ ವಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಸದಸ್ಯತ್ವ ಪಡೆದು, ದೇಶ ಸೇವಾ ಕರ್ಯದಲ್ಲಿ ತೊಡಬೇಕೆಂದು ಮನವಿ ಮಾಡಿದರು.
ರಾಷ್ಟ್ರಕ್ಕಾಗಿ ದುಡಿಯುವ ಏಕೈಕ ಪಕ್ಷ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ನಿರ್ಮಾಣ ಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ನಮಗೆ ಮತ್ತು ಭಾರತಕ್ಕೆ ಸ್ವಾತಂತ್ರ್ಯ ದೊರೆತಿದೆ. ದೇಶವು ಸ್ವಾತಂತ್ರ್ಯ ನಂತರ ಅದರಲ್ಲೂ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಗಣನೀಯ ಪ್ರಗತಿ ಕಾಣುತ್ತಿದೆ. ಜನರ ಬದುಕು ಸುಧಾರಿಸುತ್ತಿದೆ ಎಂದು ತಿಳಿಸಿದರು.
ಸಚ್ಚಿದಾನಂದ ಅವರು ಸ್ಥಳದಲ್ಲೇ 100ಕ್ಕೂ ಹೆಚ್ಚು ಜನರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬೇಲೂರು ಮಾಯಿಗಯ್ಯ, ಯತ್ತಗದಹಳ್ಳಿ ಸಂಜು, ಕಬ್ಬನಹಳ್ಳಿ ರಾಮಚಂದ್ರು, ಹನಿಯಂಬಾಡಿ ಸತೀಶ್, ಮಂಗಲ ರಮೇಶ್, ಹಳುವಾಳು ಪ್ರಮೋದ್ ಹಾಗೂ ಗ್ರಾಮದ ಮುಖಂಡರಾದ ಕಾಳೇಗೌಡ, ಜವರೇಗೌಡ, ರಕ್ಷಿತ್, ಪ್ರಸನ್ನ, ಸಿದ್ದೇಗೌಡ, ಮೋನಿಷ್ ಇತರರು ಭಾಗವಹಿಸಿದ್ದರು.