ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರಿರುವ ಹರಿಯಾಣದಲ್ಲಿ ತನ್ನ ಸೋಲಿಗೆ ಕಾರಣಗಳೇನು ಎಂದು ಕಂಡುಕೊಳ್ಳಲು ಕಾಂಗ್ರೆಸ್ ಆಳವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನ್ಯಾಷನಲ್ ಕಾನ್ಸರೆನ್ಸ್ (ಎನ್ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಎನ್ಸಿ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧಿಸಿದ್ದವು. ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಗೆಲುವು ಸಾಧಿಸಿದೆ. ಒಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿಯೂ ಆಗಲಿದ್ದಾರೆ. ಆದರೆ, ಹರಿಯಾಣದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್, ಸೋಲುಂಡಿದೆ. ಈ ಬಗ್ಗೆ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
“ಈ ಎಕ್ಸಿಟ್ ಪೋಲ್ಗಳನ್ನು ನಂಬಿಕೊಂಡು ನಾವು ನಮ್ಮ ಸಮಯ ವ್ಯರ್ಥ ಮಾಡುತ್ತಿದ್ದೇವೆಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ, ಈ ಚುನಾವಣಾ ಸಮೀಕ್ಷೆಗಳು ತಲೆಕೆಳಗಾಗುತ್ತವೆ ಎಂದು ಯಾರೂ ನಂಬಿರಲಿಲ್ಲ. ಅಂತಿಮವಾಗಿ ಏನಾಯಿತು. ಸಮೀಕ್ಷೆಗಳು 60 ಎಂದಿದ್ದಲ್ಲಿ 30 ಬಂದಿದೆ. 30 ಎಂದಿದ್ದಲ್ಲಿ 60 ಆಗಿದೆ” ಎಂದಿದ್ದಾರೆ.
ಎಕ್ಸಿಟ್ ಪೋಲ್ಗಳು ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತದೆ ಎಂದಿದ್ದವು. ಆದೆ, ಕಾಂಗ್ರೆಸ್ 35 ಸ್ಥಾನ ಗಳಿಸಿದ್ದು, ಮತ್ತೆ ಸೋಲುಂಡಿದೆ. ತನ್ನ ಸೋಲಿಬನ ಬಗ್ಗೆ ಕಾಂಗ್ರೆಸ್ ಆಳವಾಗಿ ಆಲೋಚನೆ ನಡೆಸಬೇಕು. ಸೋಲಿಗೆ ಕಾರಣಗಳನ್ನು ಕಂಡುಹಿಡಿಯಬೇಕು” ಎಂದು ಅಬ್ದುಲ್ಲಾ ಹೇಳಿದ್ದಾರೆ.
“ನನ್ನ ಕೆಲಸ ತಮ್ಮ ಪಕ್ಷವನ್ನು ಮುನ್ನಡೆಸುವುದು. ಜಮ್ಮು-ಕಾಶ್ಮೀರದಲ್ಲಿ ಮೈತ್ರಿಗೆ ಸಹಾಯ ಮಾಡುವುದು. ಅದನ್ನು ನಾನು ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
2019ರಲ್ಲಿ ಸಂವಿಧಾನದ 370ನೇ ರದ್ದಾದ ಬಳಿಕ, ಮೊದಲ ಬಾರಿಗೆ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ನಡೆದಿದೆ. ಎನ್ಸಿ-ಕಾಂಗ್ರೆಸ್ 50 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಸಜ್ಜಾಗಿವೆ.