ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಬ್ ಕಮಿಟಿ ಜೊತೆ ಎಸ್ಐಟಿ ರಚನೆಗೆ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್, ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಕುನ್ಹಾ ಆಯೋಗ ಭಾಗಶಃ ವರದಿ ನೀಡಿದೆ. ಅದರ ಮೇಲೆ ಕೆಲವು ನಿರ್ಣಯ ತೆಗೆದುಕೊಂಡಿದ್ದೇವೆ. ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಿದ್ದು, ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ಕೂಡ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ. ರಿಕವರಿ ಪ್ರೊಸೀಡಿಂಗ್ಸ್ ತಕ್ಷಣ ಪ್ರಾರಂಭ ಮಾಡಬೇಕು ಎಂದು ತಿಳಿಸಿದ್ದಾರೆ.
ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸಲು ನಿರ್ಧಾರ ಮಾಡಲಾಗಿದೆ. ಎಲ್ಲೆಲ್ಲಿ ಕ್ರಿಮಿನಲ್ ಎಲಿಮೆಂಟ್ ಇದೆ ಎಸ್ಐಟಿ ಅದರ ಬಗ್ಗೆ ಗಮನ ಹರಿಸುತ್ತದೆ. ಯಾರ ಪಾತ್ರ ಏನೂ ಎಂಬುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಪೂರ್ಣ ವರದಿ ಬಂದ ಮೇಲೆ ಏನು ಅವ್ಯವಹಾರ, ಯಾರು ಪಾಲುದಾರರು ಗೊತ್ತಾಗುತ್ತದೆ ಎಂದಿದ್ದಾರೆ.
ಆಯೋಗ 11 ಸಂಪುಟಗಳನ್ನು ಸಲ್ಲಿಸಿದೆ. 7223. 64 ಕೋಟಿ ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. 500 ಕೋಟಿ ರೂ. ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯ ಹಾಗೂ ರಾಜ್ಯದ 31 ಜಿಲ್ಲೆಗಳಿಂದ ಇನ್ನೂ ವರದಿ ಬರಬೇಕಿದೆ. 55 ಸಾವಿರ ಕಡತಗಳನ್ನು ಪರಿಶೀಲಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇರುವ ಕಾರಣ ಎಸ್ಐಟಿ ರಚನೆಗೆ ಹಾಗೂ ಕ್ಯಾಬಿನೆಟ್ ಸಬ್ ಕಮಿಟಿ ರಚನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಆಯೋಗವು ಇತ್ತೀಚೆಗೆ ನೀಡಿದ್ದ ಮಧ್ಯಂತರ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿತ್ತು. ಒಟ್ಟು 3,741.36 ಕೋಟಿ ಮೊತ್ತದ ಖರೀದಿಯಲ್ಲಿ 769 ಕೋಟಿಯಷ್ಟು ಅಕ್ರಮ ಆಗಿದೆ ಎಂದು ವರದಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವ್ಯವಹಾರಕ್ಕೆ ಕಾರಣವಾದವರಿಂದ ಹಣ ವಸೂಲಿ ಮಾಡುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಡಿಯನ್ನು ಇಟ್ಟಿದೆ.