ಮೈಸೂರು-ದರ್ಬಾಂಗ್ ಎಕ್ಸ್ಪ್ರೆಸ್ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಎರಡು ಬೋಗಿಗಳು ಹೊತ್ತಿ ಉರಿದಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಮೈಸೂರಿನಿಂದ ದರ್ಬಾಂಗ್ ಗೆ ತೆರಳುತ್ತಿದ್ದ ರೈಲು ಇಂದು ರಾತ್ರಿ 8.30 ರ ವೇಳೆ ತಮಿಳುನಾಡು ಮತ್ತು ಆಂಧ್ರದ ಗಡಿ ಕವರಪಟ್ಟೈ ಬಳಿ ಗೂಡ್ಸ್ ರೈಲಿಗೆ ಢಿಕ್ಕಿಯಾಗಿ ಆರು ಬೋಗಿಗಳು ಹಳಿ ತಪ್ಪಿದೆ.ಇದರಲ್ಲಿ ಎರಡು ಬೋಗಿಗಳು ಸಂಪೂರ್ಣವಾಗಿ ಬೆಂಕಿಯಿಂದ ಹೊತ್ತಿ ಉರಿದಿದೆ.
ಈ ದುರ್ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ರೈಲ್ವೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಹಾಯ ಮಾಡಲು ವೈದ್ಯಕೀಯ ಪರಿಹಾರ ವ್ಯಾನ್ ಮತ್ತು ರಕ್ಷಣಾ ತಂಡವನ್ನು ಚೆನ್ನೈ ಸೆಂಟ್ರಲ್ನಿಂದ ಕಳುಹಿಸಲಾಗಿದೆ. ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್, ಚೆನ್ನೈ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್ಎಂ) ಮತ್ತು ಇತರ ಹಿರಿಯ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಅಪಘಾತದಿಂದಾಗಿ ಚೆನ್ನೈ-ವಿಜಯವಾಡ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅಧಿಕಾರಿಗಳು ಸಹಜ ಸ್ಥಿತಿಗೆ ತರಲು ಶ್ರಮಿಸುತ್ತಿದ್ದಾರೆ.