ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಅಕ್ಟೋಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾದಿಗರ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿಯ ಮುಖಂಡ ಹೆಚ್.ಸಿ.ಶ್ಯಾಮಪ್ರಸಾದ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯವು ತೀವ್ರ ಶೋಷಣೆಗೆ ಒಳಗಾಗಿದ್ದು, ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಗಿದ್ದು, ಆಯೋಗವು ಸಮಗ್ರ ತನಿಖೆ ನಡೆಸಿ ಸದರಿ ಸಮುದಾಯಕ್ಕೆ 6% ಒಳ ಮೀಸಲಾತಿ ನೀಡುವಂತೆ ವರದಿ ಸಲ್ಲಿಸಿ 12 ವರ್ಷಗಳೇ ಕಳೆದಿದ್ದರು. ಸರ್ಕಾರಗಳು ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸರ್ಕಾರ ಈ ವರ್ಗವನ್ನು ಏಕೆ ದೂರ ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಸುಪ್ರೀಂ ನ್ಯಾಯಾಲಯವು ಮೀಸಲಾತಿ ನೀಡಲು ಆದೇಶ ನೀಡಿ ಮೂರು ತಿಂಗಳಾದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಮೀಸಲಾತಿ ಜಾರಿಗೆ ಸರ್ಕಾರವನ್ನು ಒತ್ತಯಿಸುವ ನಿಟ್ಟಿನಲ್ಲಿ ಅ.16ರಂದು ತಮಟೆ ಚಳವಳಿ ಹಮ್ಮಿಕೊಂಡಿದ್ದು, ಅ.16ರಂದು ಮಂಡ್ಯನಗರದ ಸಿಲ್ವರ್ ಜ್ಯುಬಿಲಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಸಿ.ಕೆ.ಪಾಪಯ್ಯ ಮಾತನಾಡಿ, ಈ ಪ್ರತಿಭಟನಾ ಬೃಹತ್ ಜಾಥಾ ಕಾರ್ಯಕ್ರಮವು ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಮಂಡ್ಯ ಜಿಲ್ಲೆಯಿಂದ 5000 ಮಂದಿ ಮಾದಿಗ ಸಮುದಾಯದವರು ಭಾಗವಹಿಸಲಿದ್ದಾರೆ. ಈ ಮೂಲಕ ಸರ್ಕಾರವನ್ನು ಒಳಮೀಸಲಾತಿ ಜಾರಿಗೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಶಂಕರ್ ಪ್ರಸಾದ್, ಆದಿ ಜಾಂಬವ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಕನ್ನಲಿ, ಡಿಎಸ್ಎಸ್ನ ನಂಜುಂಡ ಮೌರ್ಯ, ಅನ್ನದಾನಿ, ಸಿದ್ದರಾಜು, ಬಿ.ಕೃಷ್ಣ ಉಪಸ್ಥಿತರಿದ್ದರು.