ಪಟ್ಟಣಗಳಿಗೆ ಸಮರೋಪಾದಿಯಲ್ಲಿ ವಲಸೆ ಹೋಗುತ್ತಿರುವವರ ನಡುವೆ ಇಲ್ಲೊಬ್ಬರು ಯುವ ಪ್ರೊಫೆಸರ್ “ಭಾರತದ ಆತ್ಮ ಹಳ್ಳಿಗಳಲ್ಲಿದೆ. ರೈತರ ಉದ್ಧಾರವಾದರೆ ದೇಶದ ಉದ್ಧಾರವಾಗುತ್ತದೆ” ಎಂಬ ಗಾಂಧಿಯ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕೃಷಿ ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟು ಓದಿಕೊಂಡಿರುವ ಇವರ ಹೆಸರು ಸತ್ಯಮೂರ್ತಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಗ್ರಾಮದವರು. ಸ್ವತಃ ಕೃಷಿಕರಾಗಿದ್ದರೂ, ಐದಾರು ವರ್ಷಗಳಿಂದ ಮಂಡ್ಯ ಹಳ್ಳಿಹಳ್ಳಿಗಳನ್ನು ಸುತ್ತಾಡಿ,ರೈತರೊಂದಿಗೆ ಒಡನಾಡಿ ರೈತರನ್ನ ಎಲ್ಲ ಬಗೆಯಿಂದ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಇದೀಗ ರೈತರ ಶಾಲೆಯೊಂದಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ.
ಕೃಷಿಯ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದರ ಜತೆಗೆ ಬೆಳೆ ವಿಧಾನ, ರೋಗಬಾಧೆಗಳ ನಿವಾರಣೆಯ ಕ್ರಮಗಳು ಮತ್ತು ಮಾರುಕಟ್ಟೆ ಜ್ಞಾನವನ್ನು ಗ್ರಾಮಮಟ್ಟದಲ್ಲಿ ನೀಡುವ ಸದಾಶಯ ಈ ರೈತರ ಶಾಲೆಯದ್ದು. ಮಂಡ್ಯ ತಾಲ್ಲೂಕಿನ ಕೀಲಾರ ಸಮೀಪದ ಆಲಕೆರೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಭಾರತದ ಮೊದಲ ರೈತರ ಶಾಲೆಗೆ ಪ್ರಗತಿಪರ ರೈತರು ಶಂಕುಸ್ಥಾಪನೆ ನೆರವೇರಿಸಲಿದ್ದು, ಅಕ್ಕಪಕ್ಕದ ಊರುಗಳ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ.
ವಲಸೆ ತಡೆಯುವುದೇ ಗುರಿ:
ನಗರಗಳಿಗೆ ಯುಜನತೆ ವಲಸೆ ಹೋಗುವುದನ್ನು ತಪ್ಪಿಸುವುದು ಮತ್ತು ವ್ಯವಸಾಯದೆಡೆಗೆ ವಿದ್ಯಾವಂತರನ್ನು ಆಕರ್ಷಿಸಲು ರೈತರ ಶಾಲೆ ಆರಂಭಿಸುತ್ತಿದ್ದೇವೆ. ಕೃಷಿ ವಿಜ್ಞಾನಿಗಳು, ವಿಶ್ವ ವಿದ್ಯಾಲಯಗಳ ಪ್ರೊಫೆಸರ್ಗಳು, ಮಾರುಕಟ್ಟೆ ತಜ್ಞರು, ಪ್ರಗತಿಪರ ಕೃಷಿಕರು ಮತ್ತು ಯುವ ಸಾಫ್ಟ್ವೇರ್ ತಂತ್ರಜ್ಞರು ರೈತರ ಶಾಲೆಯನ್ನು ರೂಪಿಸುತ್ತಿದ್ದಾರೆ. ರೈತರಿಗೆ ಅಗತ್ಯವಾಗಿ ಬೇಕಾದ ಸಿಲಬಸ್ ಕೂಡ ತಯಾರಾಗುತ್ತಿದೆ. ಹೊಸ ವರ್ಷ 2025ರ ಜನವರಿ 1ಕ್ಕೆ ರೈತರ ಶಾಲೆಯ ಕಾರ್ಯಾಚರಣೆ ಶುರುವಾಗಲಿದೆ ಎಂದು ರೈತರ ಶಾಲೆಯ ಮುಖ್ಯಸ್ಥರಾದ ಗಂಜಾಂನ ಪ್ರೊ.ಸತ್ಯಮೂರ್ತಿ ತಿಳಿಸಿದ್ದಾರೆ.