Monday, October 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಹುನ್ನಾರ ; ನಾಳೆ ಸಾಹಿತ್ಯ ವಲಯದ ಪ್ರತಿರೋಧ

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿಸುವ ಹುನ್ನಾರದ ವಿರುದ್ಧ ನಾಡಿನ ಸಾರ್ವಜನಿಕರು ಮತ್ತು ಸಾಹಿತ್ಯ ವಲಯ ನಾಳೆ  ಬೆಳಿಗ್ಗೆ 11 ಗಂಟೆಗೆ ಮಂಡ್ಯದಲ್ಲಿ ಸಾಮೂಹಿಕ ಪ್ರತಿರೋಧ ದಾಖಲಿಸಲಿದೆ.

ಸಾಹಿತ್ಯದ ಪರಿಚಾರಿಕೆಗೆ ಜನ್ಮತಾಳಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಬೇಕಾದವರು ಸಾಹಿತಿಗಳೇ ಹೊರತು ರಾಜಕಾರಣಿಗಳೋ, ಮಠಾಧೀಶರೋ, ಇತರ ಕ್ಷೇತ್ರದ ಸಾಧಕರೋ ಅಲ್ಲ. ಅವರಿಗೆ ಮೀಸಲಾದ ಬೇರೆ ವೇದಿಕೆಗಳಿವೆ. ಇದುವರೆಗೂ ನಡೆದುಕೊಂಡು ಬಂದ ಪರಂಪರೆಗೆ ಬೆನ್ನು ತಿರುಗಿಸಿ ಸಾಹಿತಿಗಳನ್ನೇ ಹೊರಗಿಟ್ಟು ಸಮ್ಮೇಳನ ನಡೆಸುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲು ನಾವು ಬಿಡುವುದಿಲ್ಲ. ಸಾಹಿತ್ಯಾಸಕ್ತಿಗಳ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯ ವಿರುದ್ದ ನಾವೆಲ್ಲರೂ ಒಟ್ಟಾಗಿ‌ ನಿಲ್ಲುತ್ತಿದ್ದೇವೆ ಎಂದು ಸಾಹಿತ್ಯ ವಲಯದ ಜಗದೀಶ್ ಕೊಪ್ಪ, ಬಿ.ಚಂದ್ರೇಗೌಡ, ಪ್ರೊ. ಜಿ.ಟಿ.ವೀರಪ್ಪ, ಹರವು ದೇವೇಗೌಡ ಸೇರಿದಂತೆ ಹಲವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಮೆಚ್ಚಿದ, ನಾಲ್ವಡಿ ಹರಸಿದ, ಕೆವಿ ಶಂಕರಗೌಡರು ಕಟ್ಟಿದ ಮಂಡ್ಯದ ನೆಲದಲ್ಲಿ ಈಗಾಗಲೇ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘನತೆಯಿಂದ ಜರುಗಿವೆ. 1964ರಲ್ಲಿ ಜಯದೇವಿತಾಯಿ ಲಿಗಾಡೆ, 1994ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ಇಡೀ ನಾಡು ಕೊಂಡಾಡುವಂತೆ ನಮ್ಮ ಮಂಡ್ಯ ಜಿಲ್ಲೆ ಆತಿಥ್ಯ ವಹಿಸಿ, ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ.

ಈಗ ಒಂದೆಡೆ ಸಮ್ಮೇಳನಾಧ್ಯಕ್ಷತೆಗೆ ಸಾಹಿತ್ಯೇತರರನ್ನು ಮುನ್ನೆಲೆಗೆ ತಂದು, ಇನ್ನೊಂದೆಡೆ ನಾಡಿನ ವಿದ್ವಾಂಸರ ಮಾತಿಗೆ ಗೌರವ ಕೊಡದೆ ಅವಮಾನಿಸಲಾಗುತ್ತಿದೆ. ಏಳು ಕೋಟಿ ಕನ್ನಡಿಗರ ಸಾಹಿತ್ಯ ಸಮ್ಮೇಳನವನ್ನು ಏಕಮುಖವಾಗಿ ಕೊಂಡೊಯ್ಯಲಾಗುತ್ತಿದೆ. ಇದೆಲ್ಲದರ ವಿರುದ್ಧ ನಾಳೆ ನಮ್ಮ ಪ್ರತಿರೋಧವಿರಲಿದೆ. ನಾಳೆ (ಅ.22) ಬೆಳಿಗ್ಗೆ 11.30ಕ್ಕೆ ಮಂಡ್ಯದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದ್ದು, ಅಲ್ಲಿ ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿಗಳು ಮಾತನಾಡಲಿದ್ದಾರೆ. ನಂತರ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಕಾಲ್ನಡಿಗೆಯಲ್ಲಿ ಸಾಹಿತ್ಯಾಸಕ್ತರ ಮೌನ ಮೆರವಣಿಗೆ ಸಾಗಲಿದೆ. 12.30ಕ್ಕೆ ಜಿಲ್ಲಾಧಿಕಾರಿಗಳ‌ ಮೂಲಕ ನಾಡಿನ ಮುಖ್ಯಮಂತ್ರಿಗಳಿಗೆ ನಮ್ಮ ಹಕ್ಕೊತ್ತಾಯದ ಪತ್ರ ಸಲ್ಲಿಸಲಿದ್ದೇವೆ. ಈ ಸಂದರ್ಭದಲ್ಲಿ ಕನ್ನಡ ನಾಡಿನ ಸಾಹಿತ್ಯಾಸಕ್ತ ಗೆಳೆಯರೆಲ್ಲರೂ ಜತೆಗೂಡಬೇಕೆಂದು ಮನವಿ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!