ಮಳವಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲಗೊಂಡಿದೆ, ಎಲ್ಲೆಲ್ಲಿಯೂ ಕಳ್ಳತನ, ಗಾಂಜಾ ಮಾರಾಟ, ಅಕ್ರಮ ಚಟುಚಟಿಕೆಳು ಹೆಚ್ಚಾಗಿ ನಡೆಯುತ್ತಿದ್ದು, ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಅನ್ನದಾನಿ ಕಿಡಿಕಾರಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಹಶೀಲ್ದಾರ್, ಸಮಾಜಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ವರ್ಗವಣೆಗೊಂಡು ಹಲವು ತಿಂಗಳು ಕಳೆದರೂ ಕೂಡ ಅಧಿಕಾರಿಗಳನ್ನು ನೇಮಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅಧಿಕಾರಿಗಳೇ ಶಾಸಕರಿಗೆ ಹೆದರಿ ಯಾರು ಕೂಡ ಬರಲು ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ಕಾವೇರಿ ನೀರನ್ನು ನೀಡಲಾಗುತ್ತಿದೆ, ಆದರೇ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಸಿಗುವ ಗ್ರಾಮಗಳಿಗೆ ನೀರು ಕೊಡಬೇಕೆಂದು ನನ್ನ ಅಧಿಕಾರದ ಅವಧಿಯಲ್ಲಿಯೇ ಸೂಚನೆ ನೀಡಲಾಗಿತ್ತು, ಆದರೂ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ಕೊಡುತ್ತಿಲ್ಲ, ಈ ಬಗ್ಗೆ ಶಾಸಕರು ಗಮನಹರಿಸಬೇಕು, ಬೆಂಗಳೂರು ಜಲ ಮಂಡಳಿಯಲ್ಲಿ ನೀಡುವ ಉದ್ಯೋಗವನ್ನು ಜೆಡಿಎಸ್ ಕಾರ್ಯಕರ್ತರಿಗೂ ನೀಡಬೇಕು, ನೀಡದಿದ್ದರೇ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಳವಳ್ಳಿ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ನನ್ನ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿತ್ತು, ಪುತ್ಥಳಿಗೆ ಭದ್ರತೆ ಇಲ್ಲದೇ ಟ್ರಾಕ್ಟರ್ ಹಾಗೂ ಜೆಸಿಬಿ ನಿಲ್ಲಿಸುವ ಸ್ಥಳವಾಗಿದೆ, ಭಿಕ್ಷೆ ಬೇಡಿಯಾದರೂ ಪುತ್ಥಳಿ ಸ್ಥಾಪಿಸುತ್ತೇವೆಂದು ಹೇಳುವ ದಲಿತ ಸಂಘಟನೆಗಳು ಕಾಂಪೌಂಡ್ ನಿರ್ಮಾಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ ?, ಶಾಸಕರ ಕೈಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೇ ಸಂಸದರ ನಿಧಿ ಹಾಗೂ ಎಂಎಲ್ಸಿ ನಿಧಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸದಸ್ಯ ನಂದಕುಮಾರ್ ಮುಖಂಡರಾದ ಪುಟ್ಟರಾಮು, ಸದಾನಂದ, ಮೆಹಬೂಬ್ ಫಾಷ, ಆನಂದ, ಕಂಬರಾಜು, ಸಿದ್ದಚಾರಿ ಸೇರಿದಂತೆ ಇತರರು ಇದ್ದರು.