ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗವಿರುವ 33 ಎಕರೆ ನಿವೇಶನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸಮಸ್ಯೆಯನ್ನು ಇತ್ಯರ್ಥವಾಗಿದ್ದು, ತಕ್ಷಣವೇ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುವುದೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಭರವಸೆ ನೀಡಿದರು.
ಮಳವಳ್ಳಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆಗೆ ತೊಡಕಾಗಿದ್ದ ನ್ಯಾಯಾಯಲದ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ, ಹಿಂದೆ ಆಯ್ಕೆ ಮಾಡಲಾದ ಎಲ್ಲಾ ಫಲಾನುಭವಿಗಳಿಗೆ ಸೂಕ್ತ ದಾಖಲಾತಿಯನ್ನು ಪರಿಶೀಲನೆ ನಡೆಸಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ನುಡಿದರು.
ಹೊಸ ಬಡಾವಣೆಯ ನೀಲಿ ನಕ್ಷೆ ತಯಾರಿಕೆ ಹಾಗೂ ನಿವೇಶನವನ್ನು ಅಭಿವೃದ್ದಿಗೊಳಿಸಲು ಅನುದಾನ ನೀಡುವಂತೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯುವಂತೆ ಶೀಫಾರಸ್ಸು ಮಾಡಲಾಗಿದೆ, ನಿವೇಶನ ಹಂಚಿಕೆ ಸಂಬಂಧ ಯಾವುದಾದರೂ ದೂರು ಬಂದರೇ ಪರಿಶೀಲನೆ ನಡೆಸಲಾಗುವುದು ಎಂದರು.
ಮಳವಳ್ಳಿ ಪಟ್ಟಣದ ಮಾರೇಹಳ್ಳಿಯ ಬೀರೇಶ್ವರ ದೇವಸ್ಥಾನದ ಸಮೀಪ ಬಡವರಿಗೆ ಹಂಚಿಕೆ ಮಾಡಲಾದ ಆಶ್ರಯ ಬಡಾವಣೆಯಲ್ಲಿ 20 ಮೀಟರ್ ರಸ್ತೆ ಒಳಗೊಂಡ ನೀಲಿನಕ್ಷೆಯನ್ನು ತಯಾರಿಸಿ ಕೆಲವೊಂದು ಅಭಿವೃದ್ದಿ ಗೊಳಿಸಲಾಗಿದೆ, ಆದರೇ 20 ಮೀ. ರಸ್ತೆಯಲ್ಲಿ ನೀರು, ವಿದ್ಯುತ್ ಹಾಗೂ ಚರಂಡಿ ನೀಡಲು ಸಾಧ್ಯವಾಗುವುದಿಲ್ಲ, ಹಿಂದೆ ಮಾಡಲಾಗಿರುವ ನೀಲಿನಕ್ಷೆ ಅವೈಜ್ಞಾನಿಕತೆಯನ್ನು ಕೂಡಿದ್ದು, ಹಳೆಯ ನೀಲಿನಕ್ಷೆಯನ್ನು ರದ್ದುಗೊಳಿಸಿ 30 ಮೀಟರ್ ಸುಸಜ್ಜಿತ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಒಳಗೊಂಡಂತೆ ಹೊಸ ನಕ್ಷೆ ತಯಾರಿಸಲು ಆಶ್ರಯ ಸಮಿತಿ ಸಭೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಪ್ರಭಾರ ತಹಶೀಲ್ದಾರ್ ಬಿ.ವಿ ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಇದ್ದರು.