ನೆಮ್ಮದಿ, ಸಹನಶೀಲ ಬದುಕಿಗೆ ಗಾಂಧೀ ಮಾರ್ಗವಲ್ಲದೇ ಬೇರೆ ಯಾವ ಮಾರ್ಗವು ಇಲ್ಲ ಎಂದು ಲಂಕೇಶ್ ಪತ್ರಿಕೆಯ ಅಂಕಣಕಾರ ಬಿ. ಚಂದ್ರೇಗೌಡ ಅಭಿಪ್ರಾಯಪಟ್ಟರು.
ಮಂಡ್ಯನಗರದ ಗಾಂಧಿಭವನದಲ್ಲಿ ಚಿತ್ರಕೂಟದ ವತಿಯಿಂದ ಭಾನುವಾರ ಸಂಜೆ ನಡೆದ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಯವರು ಸಂಪೂರ್ಣವಾಗಿ ತಯಾರಾಗಿದ್ದು ಆಫ್ರಿಕಾದಲ್ಲಿ, ಅಲ್ಲಿ ಅವರನ್ನು ಜೈಲಿಗೆ ಹಾಕಿದ ಅಧಿಕಾರಿಗೆ ಚಪ್ಪಲಿಯನ್ನು ಹೊಲೆದು ಕೊಡುತ್ತಾರೆ. ಆಗ ಗಾಂಧಿಯವರ ವಿಶಾಲ ಮನೋಭಾವವನ್ನು ಕಂಡ, ಆ ಅಧಿಕಾರಿ ನನಗೆ ಚಪ್ಪಲಿಯನ್ನು ಹಾಕಿಕೊಳ್ಳುವ ಯೋಗ್ಯತೆಯಿಲ್ಲ ಎಂದು ಚಪ್ಪಲಿಯನ್ನು ತಿರಸ್ಕರಿಸುತ್ತಾರೆ, ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಯಾರನ್ನು ದ್ವೇಷ ಮಾಡಲಿಲ್ಲ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದರು.
ಗಾಂಧೀಯವರನ್ನು ತುಂಬ ಜನ ಆಸ್ತಿಕ ಎಂದೇ ಭಾವಿಸಿದ್ದಾರೆ. ಅವರ ಹೋರಾಟದ ಜೀವನವನ್ನು ಗಮನಿಸಿದರೆ ಗಾಂಧೀಜೀಯವರು ಯಾವತ್ತಿಗೂ ಒಂದೇ ಒಂದು ದೇವಾಲಯದ ಜಗಲಿಯ ಮೇಲೆ ನಿಂತು ಭಾಷಣ ಮಾಡಿಲ್ಲ, ಅಲ್ಲದೇ ಉಡುಪಿಗೆ ಅವರು ಭೇಟಿ ನೀಡಿದ್ದಾಗ ಕನಕನ ಕಿಂಡಿಯಿಂದ ಮಾತ್ರ ಕೃಷ್ಣನ ದರ್ಶನ ಮಾಡಿದರು. ಅಲ್ಲಿನವರು ನೇರವಾಗಿ ಬಂದು ದರ್ಶನ ಮಾಡಿ ಎಂದು ಕೇಳಿಕೊಂಡರೂ ಅವರು ಅದಕ್ಕೆ ಒಪ್ಪಲಿಲ್ಲ, ಇಂತಹ ನಡವಳಿಕೆಗಳಿಂದ ಗಾಂಧೀ ಮಹಾತ್ಮ ಎನಿಸಿಕೊಂಡರು ಎಂದು ಸ್ಮರಿಸಿದರು.
ಇಂದು ಗಾಂಧಿಯನ್ನು ಕೊಂದವರ ಕೈಗೆ ಅಧಿಕಾರ ಸಿಕ್ಕಿದೆ, ಅವರು ಗಾಂಧಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇವುಗಳನ್ನೆಲ್ಲ ಸಹಿಸಿಕೊಳ್ಳಲು ನಾವು ಗಾಂಧಿಯಾಗಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಶಿಕ್ಷಣ ತಜ್ಞ ವೋಡೆ ಪಿ.ಕೃಷ್ಣ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿದ್ದರು.
ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ, ಈ ದಿನ.ಕಾಮ್ ವಿಭಾಗ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ವಿಶೇಷ ಉಪನ್ಯಾಸ ನೀಡಿದರು. ಸಾಮಾಜಿಕ ಚಿಂತಕ ಹರವು ದೇವೇಗೌಡ ಕಾರ್ಯಕ್ರಮದ ನಿರೂಪಣೆ ಮಾಡಿದರು.