ವರದಿ:ಪ್ರಭು ವಿ.ಎಸ್.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಅವರು ಕ್ಷೇತ್ರದಾದ್ಯಂತ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನ ಸ್ವಾಮಿ ತಿಳಿಸಿದರು.
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪತಿ ಎಸ್.ಪಿ. ಸ್ವಾಮಿ ಪರ ಮತಯಾಚನೆ ನಡೆಸಿ ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.
ಶ್ರೀನಿಧಿಗೌಡ ಪ್ರತಿಷ್ಠಾನದ ವತಿಯಿಂದ ಕಳೆದ ಎರಡು ದಶಕಗಳಿಂದಲೂ ಕ್ಷೇತ್ರದಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಮತ್ತು ಸ್ಥಳೀಯ ಸಾರ್ವಜನಿಕರ ಕಷ್ಟ, ಸುಖಗಳಿಗೆ ಸ್ಪಂಧಿಸಿದ್ದು ಮತದಾರರು ಬಿಜೆಪಿ ಪಕ್ಷದತ್ತ ಒಲವು ಹೊಂದುವ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನಾದ್ಯಂತ ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದ್ದು ಪ್ರಸಕ್ತ ಚುನಾವಣೆಯಲ್ಲಿ ಎಸ್.ಪಿ. ಸ್ವಾಮಿ ಅವರು ಗೆಲುವು ಸಾಧಿಸಲಿದ್ದು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳ ಜತೆಗೆ ಸ್ವಾಮಿ ಅವರು ಕೈಗೊಂಡಿರುವ ಸೇವಾ ಕಾರ್ಯಗಳನ್ನು ತಿಳಿಸಿ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಬೇಕೆಂದು ಕೋರಿದರು.
ಈ ವೇಳೆ ಗೊರವನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶಂಕರೇಗೌಡ, ಸ್ಥಳೀಯ ಮುಖಂಡರಾದ ಸುರೇಶ್, ಮಹೇಶ್, ಅಭಿಷೇಕ್ ಸ್ಥಳೀಯ ಗ್ರಾಮಸ್ಥರು, ಮಹಿಳೆಯರು ಹಾಜರಿದ್ದರು.