ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಹಲವು ಬಿಜೆಪಿ ಶಾಸಕರು, ನಾಯಕರೇ ಗೈರಾಗಿದ್ದರು ಎಂದು ಕಾಂಗ್ರೆಸ್ ಟೀಕಿಸಿದೆ.
ಬಿ.ಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್! ಎಂದು ತಿರುಗೇಟು ನೀಡಿದೆ.
ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಕಾಂಗ್ರೆಸ್ ತಿಳಿಸಿದೆ.
ರಾಜಕೀಯ ದಿವಾಳಿತನ ಎದುರಿಸುತ್ತಿದೆಯೇ ಬಿಜೆಪಿ?
ನಮ್ಮ ಸರ್ಕಾರ ರಚನೆಯಾಗಿ ನೂರು ದಿನಗಳು ಕಳೆದಿವೆ, ನೂರು ದಿನಗಳಲ್ಲಿ ನೂರಾರು ಜನಪರ ಯೋಜನೆಗಳು, ನಿರ್ಧಾರಗಳೊಂದಿಗೆ ಮುನ್ನಡೆಯುತ್ತಿದ್ದೇವೆ. ಆದರೆ ಬಿಜೆಪಿಗೆ ನೂರು ದಿನಗಳು ಕಳೆದರೂ ಮೂರು ನಾಯಕರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕ, ರಾಜ್ಯಧ್ಯಕ್ಷ, ವಿಧಾನ ಪರಿಷತ್ ವಿಪಕ್ಷ ನಾಯಕ ಈ ಮೂರು ಹುದ್ದೆಗೆ ನಾಯಕರು ಸಿಗದಷ್ಟು ರಾಜಕೀಯ ದಿವಾಳಿತನ ಎದುರಿಸುತ್ತಿದೆಯೇ ಬಿಜೆಪಿ? ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರಿಗೆ ಈ ಮೂರು ಹುದ್ದೆಗಳಿಗೆ ನೇಮಕದ ಗ್ಯಾರಂಟಿ ಇಲ್ಲದಿರುವುದು ದುರಂತ! ಎಂದು ವ್ಯಂಗ್ಯವಾಡಿದ್ದಾರೆ.