Thursday, April 25, 2024

ಪ್ರಾಯೋಗಿಕ ಆವೃತ್ತಿ

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ‘‘ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌’’ ಯಾರು? ಆತನ ಹಿನ್ನಲೆ, ಪ್ರಭಾವವೇನು?

(ಭಾರತದ ಪ್ರಖ್ಯಾತ ಕುಸ್ತಿಪಟುಗಳನ್ನು ಬೀದಿಗೆ ತಂದು ನಿಲ್ಲಿಸಿರುವ ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ನನ್ನು ಸರ್ಕಾರ ಇನ್ನೂ ಏಕೆ ಬಂಧಿಸಿಲ್ಲ? ಆತ ಅಷ್ಟೊಂದು ಪ್ರಭಾವಿಯೇ? ಎಂಬ ಪ್ರಶ್ನೆಗಳು ಭಾರತೀಯರಲ್ಲಿ ಹುಟ್ಟಿಕೊಂಡಿವೆ. ಹೌದು, ಆತನ ಬಹಳ ಪ್ರಭಾವಿ. ಆತನ ಅಪರಾಧಗಳು ಅಷ್ಟಿಷ್ಟಲ್ಲ. ಬಿಜೆಪಿಗೆ ಶರಣ್‌ ಸಿಂಗ್‌ ಅನಿವಾರ್ಯವೇ ಹೊರತು, ಆತನಿಗೆ ಬಿಜೆಪಿ ಅನಿವಾರ್ಯವಲ್ಲ. ಅವನ ರಾಜಕೀಯ ಮತ್ತು ಅಪರಾಧ ಹಿನ್ನೆಲೆಯನ್ನು ‘ದಿ ವೈರ್‌’ (ಇಂಗ್ಲಿಷ್‌) ಜಾಲತಾಣ ಸವಿಸ್ತಾರವಾಗಿ ಬಿಚ್ಚಿಟ್ಟಿದೆ. ಪತ್ರಕರ್ತ ‘ದೀಪಕ್‌ ಗೋಸ್ವಾಮಿ’ಯವರು ಬರೆದಿರುವ ಲೇಖನದಲ್ಲಿನ ಹಲವು ವಿಷಯಗಳನ್ನು ಇಲ್ಲಿ ಅನುವಾದಿಸಲಾಗಿದೆ.)

“ಈ ಹಿಂದೆ ನಾನು ಕೊಲೆ ಮಾಡಿದ್ದೇನೆ. ಜನರು ತಮಗೆ ಬೇಕಾದುದನ್ನು ಹೇಳಲಿ. ನಾನು ಕೊಲೆ ಮಾಡಿದ್ದೇನೆ”

– ಇದು ಶಿಕ್ಷೆಗೊಳಗಾದ ಅಪರಾಧಿಯ ತಪ್ಪೊಪ್ಪಿಗೆಯಲ್ಲ. ಬಿಜೆಪಿ ನಾಯಕ ಮತ್ತು ಆರು ಬಾರಿ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ನೀಡಿದ ಹೇಳಿಕೆ. ಆದರೆ ಎಂದಿಗೂ ಕೊಲೆಯತ್ನದ ವಿಚಾರಣೆ ಆತ ಒಳಗಾಗಿಲ್ಲ.

ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜ್‌ ಭೂಷಣ್‌ನ ತೋಳ್ಬಲದ ವರದಿಗಳು ಪ್ರಸಿದ್ಧವಾಗಿದ್ದರೂ, ವಿಶೇಷವಾಗಿ ಗೊಂಡಾ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ, ಆತ ಈ ಕೃತ್ಯ ಎಸಗಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಅಂದರೆ 2022ರಲ್ಲಿ ಆತ ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದವರೆಗಷ್ಟೆ. 2019ರ ಲೋಕಸಭೆ ಚುನಾವಣೆಗೆ ಸಲ್ಲಿಸಿದ ಆತನ ಅಫಿಡವಿಟ್‌ನಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆಯ ಯತ್ನ) ಮತ್ತು ಇತರ ಗಂಭೀರ ಅಪರಾಧಗಳು ಅದರಲ್ಲಿ ಸೇರಿವೆ.

ಬ್ರಿಜ್‌ಭೂಷಣ್‌ 2011ರಿಂದಲೂ ಭಾರತದ ವ್ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷನಾಗಿದ್ದೇನೆ. ಫೆಡರೇಶನ್ ನಡೆಸುವಲ್ಲಿ ಆತ ತೋಳ್ಬಲ ಪ್ರದರ್ಶಿಸುತ್ತಾನೆಂಬ ಆರೋಪಗಳಿವೆ. ಆತನ ದಬ್ಬಾಳಿಕೆ ಪರಿಣಾಮವಾಗಿ, ಒಲಿಂಪಿಕ್ ಮಟ್ಟದ ಕುಸ್ತಿಪಟುಗಳು ಜನವರಿ 18ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ, ಸರ್ವಾಧಿಕಾರದ ಧೋರಣೆ ಮತ್ತು ಡಬ್ಲ್ಯುಎಫ್‌ಐ ನಿರ್ವಹಣೆಯಲ್ಲಿ ಹಣಕಾಸಿನ ಅಕ್ರಮಗಳು ಸೇರಿದಂತೆ ಗಂಭೀರ ಆರೋಪಗಳನ್ನು ಕುಸ್ತಿಪಟುಗಳು ಮಾಡಿದ್ದಾರೆ.

ಜನವರಿ 20ರಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ತಡರಾತ್ರಿ ನಡೆದ ಸಭೆಯ ನಂತರ ಆಟಗಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಸಿಂಗ್‌ನನ್ನು ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗುವುದು, ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಠಾಕೂರ್‌ ಭರವಸೆ ನೀಡಿದ್ದರು.

ಸಮಿತಿಯ ಮೇಲಿನ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಕುಸ್ತಿಪಟುಗಳು ಮತ್ತೆ ಪ್ರತಿಭಟನೆಗೆ ಇಳಿದರು. ಬ್ರಿಜ್‌ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಅಪ್ರಾಪ್ತ ಹೆಣ್ಣುಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವೂ ಸೇರಿದೆ. (ಪ್ರಕರಣ ದಾಖಲಾಗಿದ್ದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಬಳಿಕ ಎರಡು ಪ್ರಕರಣಗಳು ದಾಖಲಾದವು. ಒಂದು ಪೋಕ್ಸೋ ಪ್ರಕರಣ, ಮತ್ತೊಂದು ವಯಸ್ಕ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದೆ.- ಅನುವಾದಕ)

ತನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶರಣ್‌ ಸಿಂಗ್‌, “ಇವು ನಿಜವೆಂದು ಕಂಡುಬಂದರೆ ನಾನು ನೇಣು ಹಾಕಿಕೊಳ್ಳುತ್ತೇನೆ” ಎಂದಿದ್ದಾನೆ. ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾನೆ, ಆರೋಪಗಳನ್ನು ರಾಜಕೀಯ ಪ್ರೇರಿತ ಎಂದಿರುವ ಆತ, “ಈ ಹೋರಾಟ ಕಾಂಗ್ರೆಸ್ ಪ್ರಾಯೋಜಿತ” ಎಂದು ಜರಿದಿದ್ದಾನೆ.

“ಹೋರಾಟ ನಿರತ ಕುಸ್ತಿಪಟುಗಳು ಕಾಂಗ್ರೆಸ್ ಕಾಲಾಳುಗಳು” ಎನ್ನುವ ಸಿಂಗ್‌ ನಿರಪರಾಧಿಯೇನೂ ಅಲ್ಲ. ಕೊಲೆ ಮಾಡಿರುವುದಾಗಿ ತಾನೇ ಕ್ಯಾಮರಾ ಮುಂದೆ ಹೇಳಿಕೊಂಡಿದ್ದರೆ, ಇನ್ನೊಂದು ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ- ‘ನೀನು ಮತ್ತೊಂದು ಕೊಲೆ ಮಾಡಿರುವೆ’ ಎಂದು ಬ್ರಿಜ್‌ಗೆ ತಿವಿದಿದ್ದರು.

ಬ್ರಿಜ್‌ಭೂಷಣ್ ಶರಣ್‌ ಸಿಂಗ್‌ ಅಪರಾಧಗಳು

2014ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಗೊಂಡಾ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಉಲ್ಲೇಖಿಸಿ ‘ಸ್ಕ್ರಾಲ್’ ಜಾಲತಾಣ ವರದಿ ಮಾಡಿತ್ತು. 1980ರ ದಶಕದಲ್ಲಿ ಮೋಟಾರು ಸೈಕಲ್, ಬೈಕ್ ಕಳ್ಳತನದಿಂದ ಹಿಡಿದು ಮದ್ಯದ ಅಂಗಡಿಗಳನ್ನು ನಡೆಸುವವರೆಗೆ ಬ್ರಿಜ್‌ ತೊಡಗಿಸಿಕೊಂಡಿದ್ದ ಎಂದು ವರದಿ ಉಲ್ಲೇಖಿಸಿದೆ. ದೇವಾಲಯದ ಕೊಳಗಳ ಕೆಳಭಾಗದಲ್ಲಿ ಇರುವ ನಾಣ್ಯಗಳನ್ನು ಕದಿಯಲು ಹುಡುಗರನ್ನು ಕಳಿಸುತ್ತಿದ್ದನು. ನಂತರದಲ್ಲಿ ಬ್ರಿಜ್‌ ಸಿವಿಲ್ ಗುತ್ತಿಗೆದಾರನಾದನು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಂಪುಟದಲ್ಲಿ ಸಚಿವರಾಗಿದ್ದ ವಿನೋದ್ ಕುಮಾರ್ ಸಿಂಗ್ ಅಲಿಯಾಸ್ ಪಂಡಿತ್ ಸಿಂಗ್  ಈ ಎಲ್ಲಾ ಚಟುವಟಿಕೆಗಳಲ್ಲಿ ಸಹವರ್ತಿಯಾಗಿದ್ದರು.

ಬ್ರಿಜ್ ಭೂಷಣ್ ಮತ್ತು ಪಂಡಿತ್ ಸಿಂಗ್ ನಡುವೆ ವೈರತ್ವ ಏರ್ಪಟ್ಟಿತು. ಸ್ನೇಹಿತರಿಂದಾಗಿ ಇಬ್ಬರ ನಡುವೆ ಬಿರುಕುಗಳು ಮೂಡಿದವು. 1993ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 147 (ತಪ್ಪು ಹರಡುವಿಕೆ), 148 (ಮಾರಣಾಂತಿಕ ಆಯುಧವನ್ನು ಹೊಂದಿರುವುದು) ಮತ್ತು 149 (ಸಾಮಾನ್ಯ ವಸ್ತುವಿನೊಂದಿಗೆ ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ಮಾಡಿದ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಯಿತು. ಪಂಡಿತ್ ಸಿಂಗ್ ಮೇಲೆ ಗುಂಡು ಹಾರಿಸಲಾಗಿತ್ತು. ಪಂಡಿತ್ ಸಿಂಗ್ ಅವರು ‘ಸ್ಕ್ರಾಲ್‌’ಗೆ ನೀಡಿದ ಸಂದರ್ಶನದಲ್ಲಿ- “ನನ್ನ ಮೇಲೆ 20 ಗುಂಡುಗಳನ್ನು ಹಾರಿಸಲಾಯಿತು, ಹೀಗಾಗಿ 14 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದೆ” ಎಂದು ವಿವರಿಸಿದ್ದರು.

29 ವರ್ಷಗಳ ಕಾಲ ನಡೆದ ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಜ್ ಭೂಷಣ್‌ನನ್ನು ಖುಲಾಸೆಗೊಳಿಸಲಾಗಿತ್ತು. “ತನಿಖೆಯ ಸಮಯದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಲು ಯಾವುದೇ ಪ್ರಯತ್ನ ಮಾಡಿಲ್ಲ; ಅಪರಾಧಕ್ಕೆ ಬಳಸಿದ ಆಯುಧವನ್ನು ಸಹ ಮರಳಿ ಪಡೆದಿಲ್ಲ” ಎಂದು ನ್ಯಾಯಾಲಯವು ತನಿಖಾಧಿಕಾರಿಗಳನ್ನು ಟೀಕಿಸಿತ್ತು. ಆ ದಾಳಿಯ ಸಂದರ್ಭದಲ್ಲಿ ತಾನು ದೆಹಲಿಯಲ್ಲಿದ್ದೆ ಎಂದು ಬ್ರಿಜ್ ಭೂಷಣ್ ವಾದಿಸಿದ್ದನು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಧೀಶರು, “ಈ ಹೇಳಿಕೆಯಲ್ಲಿ ಸತ್ಯವಿದೆಯೇ ಎಂದು ತಿಳಿಯಲು ತನಿಖಾಧಿಕಾರಿಗಳು ಯಾವುದೇ ಪ್ರಯತ್ನ ಮಾಡಲಿಲ್ಲ, ಇದು ಇಡೀ ತನಿಖೆಯನ್ನು ಪ್ರಶ್ನಾರ್ಹಗೊಳಿಸಿದೆ” ಎಂದಿದ್ದರು.

ಪ್ರಕರಣದ ಸಂತ್ರಸ್ತ ಪಂಡಿತ್ ಸಿಂಗ್, ತೀರ್ಪಿಗೆ ಸುಮಾರು ಒಂದೂವರೆ ವರ್ಷಗಳ ಮೊದಲು ಕೋವಿಡ್-19 ಸೋಂಕಿಗೆ ಒಳಗಾಗಿ ಮೇ 2021ರಲ್ಲಿ ನಿಧನರಾದರು. ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್‌ನನ್ನು ಖುಲಾಸೆಗೊಳಿಸಲು ಇದ್ದ ಮತ್ತೊಂದು ಕಾರಣ- ಪಂಡಿತ್ ಸಿಂಗ್ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿರಲಿಲ್ಲ. “ನೀವೇಕೆ ಹೇಳಿಕೆ ದಾಖಲಿಸಿಲ್ಲ?” ಎಂಬ ಪ್ರಶ್ನೆಗೆ 2014ರ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಪಂಡಿತ್ ಸಿಂಗ್‌, “1993ರ ಫೈರಿಂಗ್ ಪ್ರಕರಣದಲ್ಲಿ ನಾನು ಬ್ರಿಜ್ ಭೂಷಣ್ ವಿರುದ್ಧ ಸಾಕ್ಷಿ ಹೇಳಲು ನಿರ್ಧರಿಸಿದರೆ, ನಾನು ಆತನನ್ನು ಜೈಲಿಗೆ ಕಳುಹಿಸಬಹುದಿತ್ತು. ಆದರೆ ಆತನನ್ನು ಬದುಕಿಸಬೇಕೆಂದು ನಾನು ಹಾಗೆ ಮಾಡಲಿಲ್ಲ. ಪ್ರಭಾವಿ ವ್ಯಕ್ತಿಯೊಂದಿಗೆ ಜಗಳವಾಡುವುದು ಖುಷಿಯಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದರು.

ನಾನು ಕೊಲೆ ಮಾಡಿದ್ದೇನೆ ಎಂದಿದ್ದ ಬ್ರಿಜ್ ಭೂಷಣ್

ಪಂಡಿತ್ ಸಿಂಗ್‌ನಿಗೆ ರವೀಂದರ್ ಸಿಂಗ್ ಎಂಬ ಸಹೋದರನಿದ್ದರು. ಇಬ್ಬರೂ ಗುತ್ತಿಗೆದಾರರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರು ಪಂಚಾಯತ್ ಸಭೆಯನ್ನು ನಡೆಸಲು ಹೋಗಿದ್ದರು. ಅಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬ್ರಿಜ್ ಭೂಷಣ್ ಪಕ್ಕದಲ್ಲಿ ನಿಂತಿದ್ದ ರವೀಂದರ್‌ಗೆ ಒಂದು ಗುಂಡು ತಗುಲಿತು. ಇದು ಭೂಷಣ್‌ನನ್ನು ಎಷ್ಟು ಕೆರಳಿಸಿತೆಂದರೆ- ಗುಂಡು ಹಾರಿಸಿದ ವ್ಯಕ್ತಿಯ ಕೈಯಿಂದ ರೈಫಲ್‌ ಕಿತ್ತುಕೊಂಡು ಗುಂಡು ಹಾರಿಸಿದನು. ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದನು.

ಈ ಘಟನೆಯ ಕುರಿತು ಸ್ವತಃ ಬ್ರಿಜ್ ಭೂಷಣ್ ಆನ್‌ಲೈನ್ ಪೋರ್ಟಲ್ ‘ಲಾಲನ್‌ಟಾಪ್‌’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾನೆ. “ನಾನು ಹಿಂದೆ ಕೊಲೆ ಮಾಡಿದ್ದೇನೆ. ಜನರು ಏನೇ ಹೇಳಿದರೂ ನಾನು ಕೊಲೆ ಮಾಡಿದ್ದೇನೆ. ರವೀಂದರ್‌ಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ತಕ್ಷಣವೇ ಗುಂಡಿಕ್ಕಿ ಕೊಂದಿದ್ದೇನೆ” ಎಂದು ಸಂದರ್ಶನದಲ್ಲಿ ತಿಳಿಸಿದ್ದನು.

ಪ್ರಸ್ತುತ ಅಯೋಧ್ಯೆ ಜಿಲ್ಲೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿರುವ ಲಲ್ಲು ಸಿಂಗ್ ಘಟನೆಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಘಟನೆಯ ಸ್ವಲ್ಪ ಸಮಯದ ನಂತರ, ಹಿರಿಯ ನಾಯಕ ಮತ್ತು ಗೊಂಡಾ ಮಾಜಿ ಸಚಿವ ಕುನ್ವರ್ ಆನಂದ್ ಸಿಂಗ್‌ನನ್ನು ದರೋಡೆಕೋರ ಕಾಯಿದೆಯಡಿಯಲ್ಲಿ ಜೈಲಿಗೆ ಕಳುಹಿಸಲಾಯಿತು ಎಂದು ಬ್ರಿಜ್‌ ವಿವರಿಸಿದ್ದಾನೆ.

ಬ್ರಿಜ್‌ ಭೂಷಣ್ ಮತ್ತೊಂದು ಕೊಲೆ ಮಾಡಿದ್ದಾನೆಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕಿಸಿದ್ದರು. ಗೊಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ನಂತರ, ಮಾಜಿ ಪ್ರಧಾನಿ ವಾಜಪೇಯಿ, “(ನೀವು) ಅವನನ್ನು ಕೊಂದಿದ್ದೀರಿ” ಎಂದಿದ್ದರು.

ಐದು ಬಾರಿ ಟಿಕೆಟ್‌ ನೀಡಿದ ಬಿಜೆಪಿ 

ಬ್ರಿಜ್ ಭೂಷಣ್ ಆರು ಬಾರಿ ಸಂಸದರಾಗಿದ್ದಾರೆ, ಐದು ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಮತ್ತು ಒಮ್ಮೆ (2009 ರಲ್ಲಿ) ಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಅವರು ಗೊಂಡಾ ಲೋಕಸಭಾ ಕ್ಷೇತ್ರದಿಂದ 1991 ಮತ್ತು 1999ರಲ್ಲಿ ಮೊದಲ ಎರಡು ಚುನಾವಣೆಗಳನ್ನು ಗೆದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಆತನಿಗೆ ಬಲರಾಂಪುರ ಕ್ಷೇತ್ರದಿಂದ ಟಿಕೆಟ್ ನೀಡಿತು, ಗೊಂಡಾದಿಂದ ಘನಶ್ಯಾಮ್ ಶುಕ್ಲಾ ಅವರನ್ನು ನಿಲ್ಲಿಸಿತು. ಮತದಾನದ ದಿನ ರಸ್ತೆ ಅಪಘಾತದಲ್ಲಿ ಶುಕ್ಲಾ ಸಾವನ್ನಪ್ಪಿದ್ದರು.

ಸ್ಕ್ರಾಲ್‌ನೊಂದಿಗಿನ ಸಂಭಾಷಣೆಯಲ್ಲಿ ಅದನ್ನು ನೆನಪಿಸಿಕೊಂಡಿರುವ ಬ್ರಿಜ್ ಭೂಷಣ್, “ನನ್ನ ವಿರೋಧಿಗಳು- ಇದು ಅಪಘಾತವಲ್ಲ ಕೊಲೆ ಎಂದು ವದಂತಿಗಳನ್ನು ಹರಡಿದರು. ಅಟಲ್ ಜಿ ನನಗೆ ಕರೆ ಮಾಡಿ, ‘ಮಾರ್ವಾ ದಿಯಾ (ನೀವು ಅವನನ್ನು ಕೊಂದಿದ್ದೀರಿ) ಎಂದಿದ್ದರು” ಎಂದು ಬ್ರಿಜ್‌ ಹೇಳಿದ್ದಾನೆ.

ಇದು ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು ಎಂದು ಬ್ರಿಜ್ ಭೂಷಣ್ ಅಭಿಪ್ರಾಯಪಡುತ್ತಾನೆ. ಪರಿಣಾಮವಾಗಿ, ಆತ 2008ರಲ್ಲಿ ಮಾಡಿದ್ದೇನು ಗೊತ್ತೆ? ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಿರ್ಣಾಯಕ ವಿಶ್ವಾಸ ನಿರ್ಣಯದಲ್ಲಿ ತಮ್ಮದೇ ಪಕ್ಷದ ವಿರುದ್ಧ ಅಡ್ಡ ಮತದಾನ ಮಾಡಿ ಸುದ್ದಿಯಾಗಿದ್ದನು. ಬಿಜೆಪಿ ಆತನನ್ನು ಹೊರಹಾಕಿತು, ಆದರೆ ಎಸ್ಪಿ ಬ್ರಿಜ್‌ ಭೂಷಣ್‌ಗೆ ಬಾಗಿಲು ತೆರೆದಿತ್ತು.

2009ರಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದನು. 2014ರಲ್ಲಿ ಮತ್ತೆ ಬಿಜೆಪಿ ಮರಳಿದನು. ಕೈಸರ್‌ಗಂಜ್‌ನಿಂದಲೇ 2019ರಲ್ಲೂ ಗೆದ್ದು ಸಂಸದನಾಗಿ ಮುಂದುವರಿದನು.

ಬಿಜೆಪಿ ಅಭ್ಯರ್ಥಿಯನ್ನು ಹತ್ಯೆ ಮಾಡಿರುವ ಬಗ್ಗೆ ಅಂದಿನ ಪ್ರಧಾನಿ ಭೂಷಣ್‌ ಮೇಲೆ ಶಂಕೆ ವ್ಯಕ್ತಪಡಿಸಿದ ಬಳಿಕವೂ ಆತ ಬಿಜೆಪಿಯಲ್ಲೇ ಉಳಿದುಕೊಂಡಿರುವುದು ಗಮನಾರ್ಹ. ಅಡ್ಡ ಮತದಾನದ ನಂತರವೇ ಆತ ಬಿಜೆಪಿಯಿಂದ ಉಚ್ಚಾಟಿತನಾಗಿದ್ದು!

ಇದ್ಯಾವುದೂ ಬ್ರಿಜ್ ಭೂಷಣ್‌ನ ರಾಜಕೀಯದ ಮೇಲೆ ಪರಿಣಾಮ ಬೀರಲಿಲ್ಲ. ಒಂದು ಕೊಲೆ ಮಾಡಿದ್ದೇನೆ ಎಂಬ ತಪ್ಪೊಪ್ಪಿಗೆ ಮತ್ತು ಆಗಿನ ಪ್ರಧಾನಿ ಮತ್ತೊಂದು ಕೊಲೆಯ ಆರೋಪ ಹೊರಿಸಿದರೂ, ಬಿಜೆಪಿ ಮತ್ತು ಪ್ರತಿಪಕ್ಷ ಎಸ್‌ಪಿ ಎರಡೂ ಈತನನ್ನು ಅಪ್ಪಿಕೊಂಡಿವೆ! ಆತನ ಅಪರಾಧಗಳನ್ನು ಮುಚ್ಚಿಹಾಕಿವೆ. ಏಕೆಂದರೆ ಆತ ಟಿಕೆಟ್ ಪಡೆದು ಚುನಾವಣೆಯ ನಂತರ ಚುನಾವಣೆಯಲ್ಲಿ ಗೆಲ್ಲುವುದನ್ನು ಮುಂದುವರಿಸಿದ್ದಾನೆ. ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ಕ್ರೀಡಾ ಸಂಘದ ಅಧ್ಯಕ್ಷರಾಗಿದ್ದಾನೆ.

ರಾಜಕೀಯ ಪ್ರಭಾವ

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆತ ಶಕ್ತಿಶಾಲಿ. ಬ್ರಿಜ್‌ ಭೂಷಣ್‌ ಬಿಜೆಪಿಗೆ ಅಗತ್ಯವಿದ್ದರೂ ಈತನಿಗೆ ಬಿಜೆಪಿ ಅಗತ್ಯವಿಲ್ಲ ಎಂಬ ವಾದವಿದೆ. ಉತ್ತರ ಪ್ರದೇಶದ ಈತನ ತವರು ಜಿಲ್ಲೆ ಗೊಂಡಾ ಮತ್ತು ಕನಿಷ್ಠ ಅರ್ಧ ಡಜನ್ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈತನ ಪ್ರಭಾವವಿದೆ.

ಗೊಂಡದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪತ್ರಿಕೆಗೆ ಪ್ರತಿಕ್ರಿಯಿಸಿ, “ಬ್ರಿಜ್ ಭೂಷಣ್ ಪಕ್ಷದ ಚಿಹ್ನೆಯನ್ನು ಮಾತ್ರ ಎರವಲು ಪಡೆಯುತ್ತಾರೆ, ಚುನಾವಣೆಯಲ್ಲಿ ಗೆಲ್ಲಲು ಅವರಿಗೆ ಅದರ ಅಗತ್ಯವಿಲ್ಲ. ಆತ ತನ್ನ ಸ್ವಂತ ಬಲದಿಂದ ಗೆಲ್ಲಬಲ್ಲ” ಎಂದಿದ್ದಾರೆ.

ಉತ್ತರ ಪ್ರದೇಶದ ಬಹ್ರೈಚ್, ಗೊಂಡಾ, ಬಲ್ರಾಮ್‌ಪುರ, ಅಯೋಧ್ಯೆ ಮತ್ತು ಶ್ರಾವಸ್ತಿ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಬ್ರಿಜ್‌ ನಡೆಸುತ್ತಿದ್ದಾನೆ. ಈ ಪ್ರದೇಶದಲ್ಲಿ ಆತ ರಾಜಕೀಯ ಪ್ರಾಬಲ್ಯ ಮೆರೆಯುವುದಕ್ಕೆ ಇದು ಕಾರಣವಾಗಿದೆ.

“ನಾನು ಯಾವುದೇ ರಾಜಕೀಯ ಉದ್ದೇಶದಿಂದ ಕಾಲೇಜುಗಳನ್ನು ಸ್ಥಾಪಿಸಲಿಲ್ಲ, ಆದರೆ ಇಂದು ಹುಡುಗರು ನನ್ನ ಸುತ್ತಲೂ ಸೇರುತ್ತಾರೆ. ಜನರು ನನ್ನನ್ನು ಮಾಫಿಯಾ ಎಂದು ಕರೆಯಬಹುದು, ಆದರೆ ನನ್ನ ವಿದ್ಯಾರ್ಥಿಗಳು ನನ್ನನ್ನು ಆರಾಧಿಸುತ್ತಾರೆ. ಹಿಂದೆ ನಾನು ಬ್ರಾಹ್ಮಣರ ಪಾದಗಳನ್ನು ಮುಟ್ಟುತ್ತಿದ್ದೆ, ಇಂದು ಯುವ ಬ್ರಾಹ್ಮಣರು ನನ್ನ ಪಾದಗಳನ್ನು ಮುಟ್ಟಿ ಗುರೂಜಿ ಎಂದು ಕರೆಯುತ್ತಾರೆ” ಎಂದು ತನ್ನನ್ನೇ ತಾನು ಬ್ರಿಜ್‌ ಬಣ್ಣಿಸಿಕೊಳ್ಳುತ್ತಾನೆ.

ಪಕ್ಷಗಳಿಗೆ ಸವಾಲು 

ಈ ಪ್ರದೇಶದಲ್ಲಿ ಪಕ್ಷಕ್ಕಿಂತಲೂ ಮುಖ್ಯ ಸ್ಥಾನವನ್ನು ಕಾಯ್ದುಕೊಳ್ಳುವ ಬ್ರಿಜ್ ಭೂಷಣ್, ತಮ್ಮದೇ ಆದ ಪಕ್ಷ ಮತ್ತು ಅದರ ನಿರ್ಧಾರಗಳಿಗೆ ಯಾವುದೇ ಪ್ರತಿಕೂಲ ಪರಿಣಾಮಗಳೊಂದಿಗೂ ಸವಾಲು ಹಾಕಬಲ್ಲ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಯುಪಿಯಲ್ಲಿ ಬಿಜೆಪಿ ಸರ್ಕಾರವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದ.  “ಪ್ರವಾಹದ ವಿಚಾರದಲ್ಲಿ ಇಂತಹ ಕಳಪೆ ನಿರ್ವಹಣೆಯನ್ನು ನಾನು ಎಂದಿಗೂ ನೋಡಿಲ್ಲ. ಜನರು ದೇವರ ಕರುಣೆಯಲ್ಲಿ ಬದುಕಿದ್ದಾರೆ” ಎಂದಿದ್ದ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿರುವ ಎಸ್‌ಪಿ ನಾಯಕ ಅಜಂ ಖಾನ್ ಅವರನ್ನು ‘ಜನರ ನಾಯಕ’ ಎಂದು ಕರೆದು ಬ್ರಿಜ್‌ ಅಚ್ಚರಿ ಮೂಡಿಸಿದ್ದನು.

ಕಳೆದ ವರ್ಷ ಜೂನ್‌ನಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಬ್ರಿಜ್ ಭೂಷಣ್ ತನ್ನ ಪಕ್ಷದ ನಿಲುವಿಗೆ ವಿರುದ್ಧವಾಗಿ ನಿಂತನು. ಎಂಎನ್‌ಎಸ್ ಅನ್ನು ತನ್ನ ಮಿತ್ರ ಪಕ್ಷವೆಂದು ಬಿಜೆಪಿ ಪರಿಗಣಿಸುತ್ತಿದ್ದ ಸಮಯದಲ್ಲಿ ಠಾಕ್ರೆ ವಿರುದ್ಧ ಬ್ರಿಜ್ ಮಾತನಾಡಿದ್ದನು.

“ಉತ್ತರ ಭಾರತೀಯರನ್ನು ಅವಮಾನಿಸಿದ ರಾಜ್ ಠಾಕ್ರೆ ಅವರು ಎಲ್ಲಾ ಉತ್ತರ ಭಾರತೀಯರಲ್ಲಿ ಕ್ಷಮೆ ಕೇಳುವವರೆಗೂ ಅಯೋಧ್ಯೆಗೆ ಪ್ರವೇಶಿಸಲು ನಾನು ಬಿಡುವುದಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಠಾಕ್ರೆಯವರನ್ನು ಭೇಟಿ ಮಾಡದಂತೆ ನಾನು ವಿನಂತಿಸುತ್ತೇನೆ. ರಾಮಮಂದಿರ ಆಂದೋಲನದಲ್ಲಿ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀಸಾಮಾನ್ಯನ ಪಾತ್ರವಿದೆ. ಠಾಕ್ರೆ ಕುಟುಂಬಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಗುಡುಗಿದ್ದನು.

ಯೋಗೋದ್ಯಮಿ ರಾಮದೇವ್‌ ವಿರುದ್ಧ ಬ್ರಿಜ್‌ ವಾಗ್ದಾಳಿ ನಡೆಸಿದ್ದನು. “ರಾಮದೇವ್‌ ಕಂಪನಿ ಪತಂಜಲಿ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದೆ. ಪತಂಜಲಿ ಉತ್ಪನ್ನಗಳ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ನಡೆಸುತ್ತೇನೆ. ರಾಮ್‌ದೇವ್ ಒಬ್ಬ ‘ಕಲಬೆರಕೆ ರಾಜ’” ಎಂದು ಕುಟುಕಿದ್ದನು. ರಾಮದೇವ್ ವಿರುದ್ಧ ನಿಲ್ಲುವಂತೆ ಸಂತ ಸಮುದಾಯದಲ್ಲಿ ಕೋರಿದ್ದನು. ಅಲ್ಲದೆ ರಾಮ್‌ದೇವ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಮತ್ತು ಉತ್ತರಾಖಂಡ್‌ ಸರ್ಕಾರಗಳಿಗೆ ಮನವಿಯನ್ನೂ ಮಾಡಿದ್ದನು.

ಬ್ರಿಜ್ ಭೂಷಣ್ ಅವಧ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಯನ ಮಾಡಿದ ನಂತರ 1990ರ ದಶಕದ ಅಂತ್ಯದಲ್ಲಿ ಬಿಜೆಪಿ ಸೇರಿದನು. ರಾಮ ಜನ್ಮಭೂಮಿ ವಿವಾದದ ಯುಗವದು. ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಯಾಶೀಲನಾಗಿದ್ದ ಬ್ರಿಜ್‌ ಬಿಜೆಪಿಯ ಕಣ್ಣು ಸೆಳೆದನು. ಇಂದು, ಅವರ ಪತ್ನಿ ಕೇತ್ಕಿ ದೇವಿ ಸಿಂಗ್ ಗೊಂಡಾ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರೆ, ಅವರ ಮಗ ಪ್ರತೀಕ್ ಭೂಷಣ್ ಸಿಂಗ್ ಗೊಂಡಾ ಸದರ್ ಕ್ಷೇತ್ರದಿಂದ ಶಾಸಕರಾಗಿದ್ದಾರೆ.

ಬ್ರಿಜ್ ಭೂಷಣ್ ರಾಮಮಂದಿರ ಹೋರಾಟದ ಪ್ರಮುಖ ಮುಖಗಳಲ್ಲಿ ಒಬ್ಬನಾಗಿದ್ದ. ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಬಾಬ್ರಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. 2020ರಲ್ಲಿ ನ್ಯಾಯಾಲಯವು ಬ್ರಿಜ್ ಭೂಷಣ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು.

“ರಾಮಮಂದಿರ ಚಳವಳಿ ಸಂದರ್ಭದಲ್ಲಿ, ಮುಲಾಯಂ ಸಿಂಗ್ ಅವರಿಂದ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ನಾನು. ವಿವಾದಾತ್ಮಕ ಕಟ್ಟಡವನ್ನು ಕೆಡವಿದ ನಂತರ ಸಿಬಿಐ ಬಂಧಿಸಿದ ಮೊದಲ ವ್ಯಕ್ತಿ ಕೂಡ ನಾನು” ಎಂದು ಆತ ಹೇಳಿಕೊಂಡಿದ್ದಾನೆ.

ಭೂಗತ ಜಗತ್ತಿನೊಂದಿಗಿನ ಆತನ ಸಂಬಂಧವೂ ಮುನ್ನೆಲೆ

1990ರ ದಶಕದ ಮಧ್ಯಭಾಗದಲ್ಲಿ ಭೂಗತ ಜಗತ್ತಿನೊಂದಿಗಿನ ಆತನ ಸಂಬಂಧವೂ ಮುನ್ನೆಲೆಗೆ ಬಂದಿತು. ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆತ ತಿಹಾರ್ ಜೈಲಿನಲ್ಲಿ ಹಲವಾರು ತಿಂಗಳು ಕಳೆಯಬೇಕಾಯಿತು. ಹೀಗಾಗಿ ಭಯೋತ್ಪಾದನೆ ಮತ್ತು ವಿಭಜಕ ಚಟುವಟಿಕೆಗಳ ತಡೆ ಕಾಯ್ದೆ (ಟಾಡಾ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದ ಆತನನ್ನು ಖುಲಾಸೆಗೊಳಿಸಲಾಗಿತ್ತು. ಆತ ಜೈಲಿನಲ್ಲಿದ್ದ ಸಂದರ್ಭದಲ್ಲಿ ಆತನ ಪತ್ನಿ ಗೊಂಡಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

ಮಗನ ಆತ್ಮಹತ್ಯೆ

2004ರಲ್ಲಿ ಬ್ರಿಜ್ ಭೂಷಣ್‌ನ 22 ವರ್ಷದ ಮಗ ಶಕ್ತಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ತಂದೆಯ ಮೇಲೆ ಗುರುತರವಾದ ಆರೋಪಗಳನ್ನು ಮಾಡಿದ್ದನು. “ನೀವು ಉತ್ತಮ ತಂದೆ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ನೀವು ನನ್ನ ಒಡಹುಟ್ಟಿದವರನ್ನೂ ನನ್ನನ್ನೂ ನೋಡಿಕೊಳ್ಳಲಿಲ್ಲ. ನೀವು ಯಾವಾಗಲೂ ನಿಮ್ಮ ಬಗ್ಗೆ ಯೋಚಿಸುತ್ತೀರಿ. ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲ. ನಮ್ಮ ಭವಿಷ್ಯವು ಕತ್ತಲೆಯಲ್ಲಿದೆ. ಹೀಗಾಗಿ ನಾವು ಬದುಕುವುದರಲ್ಲಿ ಅರ್ಥವಿಲ್ಲ” ಎಂದು ಶಕ್ತಿ ಸಿಂಗ್‌ ತನ್ನ ಸೂಸೈಡ್ ನೋಟ್‌ನಲ್ಲಿ ಬರೆದಿದ್ದರು.

ಕುಸ್ತಿ ಫೆಡರೇಶನ್ ಮುಖ್ಯಸ್ಥರಾಗಿ ದಬ್ಬಾಳಿಕೆ

ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲುಎಫ್‌ಐ) ನಿರ್ವಹಿಸುವಲ್ಲಿಯೂ ದಬ್ಬಾಳಿಕೆಯನ್ನು ಬ್ರಿಜ್‌ ನಡೆಸಿದ್ದಾನೆ. 2021ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, “ಅವರು (ಕುಸ್ತಿಪಟುಗಳು) ಬಲವಾಗಿರುತ್ತಾರೆ. ಅವರನ್ನು ನಿಯಂತ್ರಿಸಲು ನಿಮಗೆ ಬಲವಾದ ಯಾರಾದರೂ ಬೇಕು. ಇಲ್ಲಿ ನನಗಿಂತ ಬಲಶಾಲಿ ಯಾರಾದರೂ ಇದ್ದಾರೆಯೇ?” ಎಂದು ಪ್ರಶ್ನಿಸಿದ್ದನು ಬ್ರಿಜ್‌.

ಫೆಡರೇಶನ್‌ನಲ್ಲಿ ಕುಸ್ತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಅವನದೇ ಅಂತಿಮ ಮಾತು ಎಂಬುದನ್ನು ವರದಿ ಬಯಲಿಗೆಳೆದಿತ್ತು. ಪ್ರತಿ ಚಿಕ್ಕ ಮತ್ತು ಪ್ರಮುಖ ಕುಸ್ತಿ ಪಂದ್ಯಾವಳಿಯ ಮೇಲೆ ಆತ ಕಣ್ಣಿಡುತ್ತಾನೆ. ಆಗಾಗ್ಗೆ ರೆಫರಿಗೆ ಸೂಚನೆಗಳನ್ನು ನೀಡುವುದು ಮತ್ತು ತೀರ್ಪುಗಾರರನ್ನು ಶಿಕ್ಷಿಸುವುದು ಆತನ ಜಾಯಮಾನ.

ಸರ್ವಾಧಿಕಾರದ ವರ್ತನೆ

ಆತನ ಸರ್ವಾಧಿಕಾರದ ವರ್ತನೆ ಅಷ್ಟಿಷ್ಟಲ್ಲ. ಜನವರಿ 2021 ರಲ್ಲಿ ನೋಯ್ಡಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರೈಲ್ವೇ ಕೋಚ್‌ನನ್ನು ಅಮಾನತುಗೊಳಿಸಿದ್ದನು. ಕುಸ್ತಿಪಟು ಬೆಂಬಲಿಗರು ಆಟದ ಅಖಾಡಕ್ಕೆ ಪ್ರವೇಶಿಸಿದ್ದರಿಂದ ದೆಹಲಿಯ ಕುಸ್ತಿಪಟುವಿಗೆ ದಂಡ ವಿಧಿಸುವಂತೆ ರೆಫರಿಗೆ ಸೂಚಿಸಿದನು. ಅಂತಹ ಯಾವುದೇ ನಿಯಮವಿಲ್ಲ ಎಂದು ರೆಫರಿ ಹೇಳಿದರೂ ಸಿಂಗ್ ಸುಮ್ಮನಿರಲಿಲ್ಲ.

ಕುಸ್ತಿ ಪಂದ್ಯಾವಳಿಗಳಿಗೆ ದೈಹಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ ಬ್ರಿಜ್‌ ಏನು ಮಾಡುತ್ತಾನೆ ಗೊತ್ತೆ? ಆ ಸ್ಥಳದಲ್ಲಿ ಎಲ್ಲೆಡೆ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅದನ್ನು ಮನೆಯಿಂದಲೇ ಮೇಲ್ವಿಚಾರಣೆ ಮಾಡುತ್ತಾನೆ. ಸ್ವತಃ ಆತನೇ ಇದನ್ನು ಒಪ್ಪಿಕೊಂಡಿದ್ದಾನೆ.

ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್‌ನ ವರ್ತನೆಯ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಹೇಳುತ್ತದೆ. ಆದ್ದರಿಂದ ವಿವಾದಾತ್ಮಕ ಪಂದ್ಯದಲ್ಲಿ ಸೋತಾಗ, ತೀರ್ಪುಗಾರರ ಬಳಿಗೆ ಹೋಗುವ ಬದಲು, ಅವರು ನೇರವಾಗಿ ಬ್ರಿಜ್‌ಭೂಷಣ್‌ಗೆ ಮನವಿ ಮಾಡುತ್ತಾರೆ.

‌ಇದರ ನಡುವೆ ಕುಸ್ತಿಪಟುಗಳು ಬ್ರಿಜ್ ಭೂಷಣ್ ಮುಂದೆ ನಮಸ್ಕರಿಸಿ ಆತನಿಂದ ಆಶೀರ್ವಾದ ಪಡೆಯುವ ದೃಶ್ಯಗಳು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಪಂದ್ಯಗಳ ಸಂದರ್ಭದಲ್ಲಿ ಸಾಮಾನ್ಯವಾಗಿರುತ್ತದೆ.

ಆತನ ಪ್ರಭಾವ ಎಷ್ಟಿದೆಯೆಂದರೆ- ಮುಂದಿನ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ತಯಾರಿ ಮಾಡಲು ಕೇಂದ್ರ ಸರ್ಕಾರ ರೂಪಿಸಿದ ‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್)’ ಯೋಜನೆ ವಿರುದ್ಧ ಆತ ಮಾತನಾಡಿದ್ದಾನೆ. ಈ ಯೋಜನೆಯಡಿ ಕ್ರೀಡಾಪಟುಗಳನ್ನು ನೇರವಾಗಿ ಸಂಪರ್ಕಿಸದಂತೆ ಸರ್ಕಾರಕ್ಕೆ ಹೇಳಿದ್ದಾನೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್ ನಂತರ ನೀಡಿದ ಹೇಳಿಕೆ ಹೀಗಿತ್ತು: “ಕುಸ್ತಿಪಟುಗಳನ್ನು ಬೆಂಬಲಿಸುವ ಖಾಸಗಿ ಹಾಗೂ ಲಾಭೋದ್ದೇಶವಿಲ್ಲದ ಸಂಸ್ಥೆಗಳ ಮೇಲೆ ಫೆಡರೇಶನ್ ಕಣ್ಣಿಡುತ್ತದೆ.”

ಕುಸ್ತಿ ಫೆಡರೇಶನ್ ನಡೆಸುವಲ್ಲಿ ಸಿಂಗ್ ತೋರುವ ದುರ್ವತನೆಗಳ ಬಗ್ಗೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಫೋಗಟ್ ಅವರು ವಿವರವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುಸ್ತಿಪಟುಗಳ ಆಹಾರಕ್ರಮದಲ್ಲಿ ಹಸ್ತಕ್ಷೇಪ ಮಾಡುವುದರ ಜೊತೆಗೆ, ಕುಸ್ತಿಪಟುಗಳು ಪಡೆಯುವ ಪ್ರಾಯೋಜಕತ್ವದ ಅರ್ಧದಷ್ಟು ಹಣವನ್ನು ಸಹ ಆತ ತೆಗೆದುಕೊಳ್ಳುತ್ತಾನೆಂದು ಮಹಾವೀರ್‌ ಆರೋಪಿಸಿರುವುದನ್ನು ಗಮನಿಸಬಹುದು.

ಮೂಲ: ದಿ ವೈರ್‌, ದೀಪಕ್‌ ಗೋಸ್ವಾಮಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!