ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಚಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್ ಗೌಡ ಅಪಪ್ರಚಾರ ನಡೆಸುತ್ತಿದ್ದು, ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ
ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ಗೌಡ ಅವರು, ಚಲುವರಾಯಸ್ವಾಮಿ ಅವರು ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ್ದಾರೆ. ಜಾತಿ ನಿಂದನೆ (ಅಟ್ರಾಸಿಟಿ) ಕಾಯ್ದೆ ರದ್ದು ಮಾಡಬೇಕೆಂದು ಸದನದಲ್ಲಿ ಮಾತನಾಡಿ, ದಲಿತ ವಿರೋಧಿ ಧೋರಣೆ ತೋರಿದ್ದಾರೆ. ದಲಿತ ಹೋರಾಟಗಾರರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎನ್ನುವ ಸುಳ್ಳುಗಳಿಂದ ಕೂಡಿರುವ ಕರಪತ್ರ ಹಾಕಿಸಿ ಹಂಚುತ್ತಿದ್ದಾರೆ. ಸುರೇಶ್ ಗೌಡರ ಆರೋಪ ಸರಿಯಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿಯವರಿಗೆ ದಲಿತರನ್ನು ಕಂಡರೆ ಆಗೋಲ್ಲ ಎಂಬಿತ್ಯಾದಿ ಸುಳ್ಳುಗಳಿಂದ ಅಪಪ್ರಚಾರ ಮಾಡಲಾಗುತ್ತಿದ್ದು, ಜಾತಿ ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಪಿತೂರಿ ಈ ಕರಪತ್ರದಲ್ಲಿ ಮಾಡಲಾಗಿದೆ.ಈ ಬಗ್ಗೆ ತಾಲ್ಲೂಕ ಚುನಾವಣಾಧಿಕಾರಿಗೆ ದೂರು ನೀಡಲಾಗಿದ್ದು,ಇಂದು ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ನೀಡಲಿದ್ದೇವೆ ಎಂದರು.
ನಾಗಮಂಗಲ ಕ್ಷೇತ್ರದಲ್ಲಿ ಒಕ್ಕಲಿಗರು, ದಲಿತ ಸಮುದಾಯಗಳು, ಅನ್ಯೋನ್ಯವಾಗಿ ಬದುಕುತ್ತಿದ್ದು, ರಾಜಕೀಯವಾಗಿ ಪರಸ್ಪರ ಒಳಗೊಂಡು ಮುನ್ನಡೆಯುತ್ತಿವೆ. ಆದರೆ ಈ ಸಮುದಾಯಗಳ ನಡುವೆ ಒಡಕು ತಂದು, ಜಾತಿ ಸಂಘರ್ಷ ವಾತಾವರಣ ನಿರ್ಮಿಸಲು ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಷಡ್ಯಂತ್ರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಅವರ ವಿರುದ್ಧ ದಲಿತ ಸಮುದಾಯವನ್ನು ಪ್ರಚೋದಿಸುವ ಹುನ್ನಾರ ನಡೆಸಿದ್ದು,ಜಿಲ್ಲಾ ಚುನಾವಣಾಧಿಕಾರಿಗಳು ಈ ಕರಪತ್ರ ಹಂಚದಂತೆ ತಡೆಯಬೇಕು. ಇದಕ್ಕೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಎಸ್ಸಿ,ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಮುಖಂಡರಾದ ನಾಗಭೂಷಣ್, ವಿಜಯ್ ಕುಮಾರ್, ಪ್ರಸನ್ನ, ಚಂದ್ರು ಉಪಸ್ಥಿತರಿದ್ದರು.