ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೊರಗುತ್ತಿಗೆ ಏಜೆನ್ಸಿ ವಂಚಿಸಿದ್ದ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವ ಸಂಬಂದ ಈ ಪ್ರಕರಣದಲ್ಲಿ ಅಂದಿನ ಮಿಮ್ಸ್ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಜಂಟಿ ಸಮಿತಿಯೊಂದನ್ನು ರಚಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಸುಜಾತ ರಾಥೋಡ್ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ
2015-16ನೇ ಸಾಲಿನಲ್ಲಿ ಮಂಡ್ಯ ಮಿಮ್ಸ್ ಗೆ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸೇವೆ ಒದಗಿಸಿದ್ದ ಕಾಂತಿ ಏಜೆನ್ಸಿ ನೆಟ್ವರ್ಕ್ ಎಂಬ ಏಜೆನ್ಸಿಯು 12 ಮಂದಿ ರೀಲಿವರುಗಳನ್ನು (ರಜಾ ಕಾಲದ ಬದಲಿ ಭದ್ರತಾ ಸಿಬ್ಬಂದಿ) ಹೆಚ್ಚುವರಿಯಾಗಿ ಒದಗಿಸಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹12.00.206 ಲಕ್ಷ ರೂಗಳನ್ನು ವಂಚಿಸಿತ್ತು.ಈ ಸಂಬಂದ ಏಜೆನ್ಸಿಯು ಸಲ್ಲಿಸಿದ್ದ ನಕಲಿ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಪರೀಶೀಲಿಸದೆ ನಿಯಮ ಉಲ್ಲಂಘಿಸಿ ಹಣ ಬಿಡುಗಡೆ ಮಾಡಲಾಗಿತ್ತು.
ಈ ಸಂಬಂಧ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ದೂರು ಸಲ್ಲಿಸುತ್ತಿದ್ದಂತೆ 2019ರಲ್ಲಿ ಸದರಿ ಏಜೆನ್ಸಿಯ ಎರಡು ತಿಂಗಳ ಬಿಲ್ ಬಾಕೀ ಹಾಗೂ ಏಜೆನ್ಸಿಯ ಇಂಎಂಡಿ ಮೊತ್ತ ₹೩೨ಲಕ್ಷ ರೂಗಳನ್ನು ಮಿಮ್ಸ್ ಮುಟ್ಟುಗೋಲು ಹಾಕಿಕೊಂಡಿತ್ತು.
ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಈ ಅಧಿಕಾರಿಗಳ ವಿರುದ್ದ ತನಿಖೆಗೆ ಎಸಿಬಿಗೆ ದೂರು ಸಲ್ಲಿಸಲಾಗಿತ್ತು.
ಎಸಿಬಿ ತನಿಖೆಗೆ ಅನುಮತಿ ನೀಡುವಲ್ಲಿ ಎರಡು ಮುಕ್ಕಾಲು ವರ್ಷ ವಿಳಂಬ ನೀತಿ ಅನುಸರಿಸಲಾಗಿತ್ತು.ಈಚೆಗೆ ರಾಜ್ಯಪಾಲರು ಎಸಿಬಿ ಹಾಗೂ ಲೋಕಾಯುಕ್ತ ತನಿಖೆಗೆ ಅನುಮತಿ ನೀಡದ ಪ್ರಕರಣಗಳ ವಿವರ ಕೋರಿದ ಬೆನ್ನಲ್ಲೆ ಹಾಗೂ ಈ ಸಂಬಂದ ಈಗಿನ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ಸರ್ಕಾರದ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ ಬೆನ್ನಲ್ಲೆ ಎಚ್ಚೆತ್ತ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಎಸಿಬಿ ತನಿಖೆಗೆ ಪ್ರಕರಣವನ್ನು ವಹಿಸುವ ಸಂಬಂಧ ಅಂದಿನ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್, ಆಡಳಿತಾಧಿಕಾರಿ ಜಯಾ, ಆರ್ಥಿಕ ಸಲಹೆಗಾರರಾಗಿದ್ದ ಸಿದ್ದಗಂಗಮ್ಮ ವಿರುದ್ದದ ಆರೋಪಗಳ ತನಿಖೆಗೆ ಚಾಮರಾಜನಗರ ಮೆಡಿಕಲ್ ಕಾಲೇಜು ನಿರ್ದೇಶಕ, ಬೆಂಗಳೂರು ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರ ಜಂಟಿ ತನಿಖಾ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.