ಮಂಡ್ಯ ಜಿಲ್ಲೆಯಲ್ಲಿ ಪಡಿತರ ಆಹಾರ ಧಾನ್ಯ, ವಸತಿ ಶಾಲೆ, ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿ ಊಟದಲ್ಲಿ ಕಳಪೆಯಿದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್ ಕೃಷ್ಣ ಅವರು ತಿಳಿಸಿದರು.
ಮಂಡ್ಯನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಕುರಿತು ಮಾತನಾಡಿದರು.
ಗೋದಾಮುಗಳಿಂದ ನಿಗದಿತ ಪ್ರಮಾಣದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ರವಾನೆಯಾಗುತ್ತಿಲ್ಲ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲೂ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ದೂರು ಅರ್ಜಿಗಳು ಬಂದಿವೆ. ಹೀಗಾಗಿ ಗೋದಾಮು, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಅವ್ಯವಹಾರ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗೋಧಿ ಬಳಕೆ
ಹಾಸ್ಟೆಲ್ ಗಳಲ್ಲಿ ಚಪಾತಿ ತಯಾರಿಸಿ ನೀಡಲು ಕಷ್ಟಕರವಾಗುತ್ತದೆ. ಚಪಾತಿ ತಯಾರಿಸುವ ಯಂತ್ರ ನೀಡಲು ಚಿಂತಿಸಲಾಗುತ್ತಿದೆ. ಇದರೊಂದಿಗೆ ಗೋಧಿಯನ್ನು ಪಾಯಸ ಹಾಗೂ ಮುದ್ದೆಯನ್ನು ತಯಾರಿಸಲು ಬಳಸಲು ಆದ್ಯತೆ ನೀಡಲಾಗುವುದು.ಗೋಧಿ ಬೇಡಿಕೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದರು
ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮೀಣ, ತುಮಕೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರಿಂದ ಅಹವಾಲು ಸ್ವೀಕರಿಸಿದ್ದೇವೆ. ಆಹಾರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಆಹಾರ ಉತ್ತಮವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಕಳಪೆ ಆಹಾರ ಮತ್ತು ಕಲಬೆರಕೆ ಆಹಾರದ ಬಗ್ಗೆ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ನಾಲ್ಕು ದಿನಗಳ ಕಲ ಮಂಡ್ಯ ಜಿಲ್ಲೆಯಲ್ಲಿ , ಅಂಗನವಾಡಿ, ಹಾಸ್ಟೆಲ್, ಬೇಕರಿ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಆಯೋಗದ ವ್ಯಾಪ್ತಿಗೆ ಆಹಾರ, ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕಾನೂನು ಮಾಪನ ಶಾಸ್ತ್ರ ಸೇರಿದಂತೆ 14 ಇಲಾಖೆಗಳು ಬರುತ್ತವೆ. ಈ ಇಲಾಖೆಗಳಲ್ಲಿ ಯಾವುದೇ ಸಮಸ್ಯೆ, ಕುಂದುಕೊರತೆ ಇದ್ದರೆ ಆಯೋಗದ ಗಮನಕ್ಕೆ ತಂದರೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಿಪಿಎಲ್ ಕಾರ್ಡ್ ಕೊಡಿಸಲು ಕ್ರಮ
ಆದಾಯ ತೆರಿಗೆದಾರರು ಎಂಬ ಕಾರಣದಿಂದ ಅನೇಕ ಬಡವರ ಬಿಪಿಎಲ್ ಕಾರ್ಡ್ ರದ್ದಾಗಿರುವುದು ಗಮನಕ್ಕೆ ಬಂದಿದೆ. ಬಡವರು ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪುನರ್ ಪರಿಶೀಲಿಸಿ, ರದ್ದಾಗಿರುವ ಬಿಪಿಎಲ್ ಕಾರ್ಡ್ಗಳನ್ನು ಬಡವರಿಗೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಡಿತರದಲ್ಲಿ ಬೆಲ್ಲ ವಿತರಿಸಲು ಕ್ರಮ
ಆಲೆಮನೆ ಮಾಲೀಕರು ಬೆಲ್ಲವನ್ನು ಪಡಿತರದಲ್ಲಿ ಸೇರಿಸಲಯ ಮನವಿ ಸಲ್ಲಿಸಿದ್ದಾರೆ. ಬೆಲ್ಲವನ್ನು ಪಡಿತರದಲ್ಲಿ ಸೇರಿಸಿದರೆ ಬೆಳಗಾವಿ, ಮಂಡ್ಯ ಸೇರಿದಂತೆ ಕಬ್ಬು ಬೆಳೆಯುವ ಜಿಲ್ಲೆಗಳ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ಎಂ, ದೊಡ್ಡಲಿಂಗಣ್ಣ, ರೋಹಿಣಿ ಪ್ರಿಯ, ಕೆ. ಎಸ್ ವಿಜಯಲಕ್ಷ್ಮಿ ಅವರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.