ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಕುಸ್ತಿಪಟು ಗಿರೀಶ್ ಮೈಸೂರು ದಸರಾ 2024ರ ಕುಸ್ತಿ ಕ್ರೀಡಾಕೂಟದಲ್ಲಿ “ದಸರಾ ಕುಮಾರ” ಪಟ್ಟವನ್ನು ಗೆದ್ದಿದ್ದಾರೆ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಶಕ್ತಿ, ಕೌಶಲ್ಯ ಮತ್ತು ಉತ್ಸಾಹದಿಂದ ಎದುರಾಳಿಯನ್ನು ಸೋಲಿಸಿ ಮಂಡ್ಯದ ಕೀರ್ತಿ ಹೆಚ್ಚಿಸಿದ್ದಾರೆ.
74 ಕೆ.ಜಿ ವಿಭಾಗದ ಪ್ರಶಸ್ತಿಗೆ ನಡೆದ 20 ನಿಮಿಷಗಳ ಹೋರಾಟದಲ್ಲಿ ಮದಗಜಗಳಂತೆ ಸೆಣಸಾಡಿದ ಇಬ್ಬರೂ ಸ್ಪರ್ಧಿಗಳಲ್ಲಿ ಮಂಡ್ಯದ ಗಿರೀಶ್ ಬಲವಾದ ಪಟ್ಟುಗಳಿಂದ ಮೈಸೂರಿನ ಆರ್.ನಿತಿನ್ ಅವರನ್ನು 25–13ರಿಂದ ಮಣಿಸುವ ಮೂಲಕ ರಾಗಿಮುದ್ದೆಯ ಪವರ್ ಏನೆಂಬುದನ್ನು ತೋರಿಸಿಕೊಟ್ಟರು. ಮಂಡ್ಯ ಚಿತ್ರಕೂಟ ಬಳಗದ ಎಲ್ಲ ಸದಸ್ಯರು ಪಾಲಹಳ್ಳಿ ಗಿರೀಶ್ ಅವರನ್ನು ಅಭಿನಂದಿಸಿದ್ದಾರೆ.