ಬಾಗಲಕೋಟೆ ರಾಮರೂಢ ಮಠದ ಮಠಾಧಿಪತಿ ಪರಮ ರಾಮರೂಢ ಸ್ವಾಮೀಜಿ ಅವರನ್ನು ಹೆದರಿಸಿ ಹಣ ವಂಚಿಸಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಮಠ ಹಾಗೂ ಸ್ವಾಮಿಜಿಯವರಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಗಂಗಮತಸ್ಥ ಬೆಸ್ತರ್ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ 34 ಶಾಲಾ ಮಠಗಳನ್ನು ಹೊಂದಿರುವ ಬಾಗಲಕೋಟೆಯ ರಾಮರೂಢ ಮಠಕ್ಕೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ, ಆದರೆ ವ್ಯಕ್ತಿಯೊಬ್ಬ ನಕಲಿ ಪೊಲೀಸರೊಂದಿಗೆ ಮಠಕ್ಕೆ ಆಗಮಿಸಿ ಬೆದರಿಸಿ ಸುಮಾರು ಒಂದು ಕೋಟಿ ಹಣವನ್ನು ವಸೂಲಿ ಮಾಡುವುದರ ಜೊತೆಗೆ ಇನ್ನಷ್ಟು ಹಣ ಕೊಡಬೇಕೆಂದು ಒತ್ತಾಯಿಸಿದ್ದಾನೆ, ಈ ಘಟನೆಯಿಂದ ಅಘಾತಕ್ಕೆ ಒಳಗಾಗಿರುವ ಸ್ವಾಮೀಜಿಯವರಿಗೆ ಹಾಗೂ ಮಠಕ್ಕೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ ಎಂದರು.
ಮುಖಂಡ ಆಟೋ ಮಂಜಣ್ಣ ಮಾತನಾಡಿ, ಹಿಂದುಳಿದ ಸಮುದಾಯದ ಗಂಗಮತಸ್ಥ ಬೆಸ್ತರ್ ಜನಾಂಗಕ್ಕೆ ಸೇರಿದ ಪ್ರಮುಖ ಮಠಗಳಲ್ಲಿ ಒಂದಾದ ಬಾಗಲಕೋಟೆ ರಾಮರೂಢ ಮಠದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಯಜಮಾನ್ ಬಸವರಾಜು ಮಾತನಾಡಿ, ಸರ್ವಧರ್ಮದವರು ನಿತ್ಯವೂ ಮಠಕ್ಕೆ ಬಂದು ಹೋಗುತ್ತಾರೆ. ರಾಮರೂಢಸ್ವಾಮೀಜಿ, ಚಿಕ್ಕರಾಮಾರೂಢಸ್ವಾಮೀಜಿಗಳ ನಂತರ ಮಠವನ್ನು ಮುನ್ನಡೆಸಿ ಅಪಾರ ಭಕ್ತ ವೃಂದವನ್ನು ಹೊಂದಿರುವ ಮಠದ ಭಕ್ತರಿಗೆ ಇಂಥ ಘಟನೆಯಿಂದ ನೋವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಗಂಗಾಧರ್, ರಾಮಸ್ವಾಮಿ, ಜಯರಾಮು, ಅಣ್ಣಯ್ಯ, ಕುಮಾರ್, ವೆಂಕಟೇಶ್, ವೇಣು, ಜಗದೀಶ್, ಹೆಮಂತ್ರಾಜ್ ಎಚ್ಕೆ ಶಿವಣ್ಣ, ಶಿವಣ್ಣ. ಮಾರ್ಕಾಂಡಯ್ಯ ಕರಿಯಪ್ಪ, ನಂಜುಂಡಪ್ಪ, ನಂಜುಂಡ, ಮಾದೇಶ್, ಶಿವಸ್ವಾಮಿ, ವೇಣು ಜಗ ಸೇರಿದಂತೆ ಇತರರು ಇದ್ದರು.