ಕರ್ನಾಟಕ ಸಂಘ ಹಾಗೂ ಇಂಡುವಾಳು ಹೆಚ್ ಹೊನ್ನಯ್ಯ ಕುಟುಂಬ ವರ್ಗದ ಆಶ್ರಯದಲ್ಲಿ ಇಂಡವಾಳು ಹೆಚ್ ಹೊನ್ನಪ್ಪ ಅವರನ್ನು ಕುರಿತ ‘ನೆಲದ ಕಣ್ಣು’ ಕೃತಿ ಬಿಡುಗಡೆ, ಹೆಚ್ ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಇಂಡುವಾಳು ಹೆಚ್ ಹೊನ್ನಪ್ಪ ಸೇವಾ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮವನ್ನು ಜೂ. 2ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್. ಹೊನ್ನಪ್ಪ ಅವರ ಕುರಿತ ‘ನೆಲದಕಣ್ಣು’ ಕೃತಿಯನ್ನು ಡಾ.ಎಂ.ಎಸ್ ಅನಿತಾ ರಚಿಸಿದ್ದಾರೆ, ಅಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಕೃತಿ ಬಿಡುಗಡೆ ಮಾಡುವರು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅಧ್ಯಕ್ಷತೆ ವಹಿಸಿ, ಹೆಚ್. ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಯನ್ನು ಫುಟ್ಬಾಲ್ ಆಟಗಾರ ಬಿ ವೆಂಕಟ್ ಅವರಿಗೆ ಪ್ರಧಾನ ಮಾಡಲಿದ್ದಾರೆ ಎಂದರು .
ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರು ಇಂಡುವಾಳು ಹೆಚ್.ಹೊನ್ನಪ್ಪ ಸೇವಾ ಟ್ರಸ್ಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಹೆಚ್.ಹೊನ್ನಪ್ಪ ಸಂಸ್ಮರಣೆ ಕೃತಿ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್ ಬಿ ಶಂಕರಗೌಡ ಮಾತನಾಡಲಿದ್ದು, ಕಾರ್ಯಕ್ರಮದಲ್ಲಿ ಡಾ.ಎಂ. ಎಸ್ ಅನಿತಾ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ, ಡಾ.ಆದರ್ಶ್ ಹೊನ್ನಪ್ಪ ಉಪಸ್ಥಿತರಿದ್ದರು.