ಇಂದಿನ ಮಂತ್ರಿ ಮಂಡಲ ನೋಡಿದರೆ ಅಪ್ಪ ಮುಖ್ಯಮಂತ್ರಿ, ಮಗ ಮಂತ್ರಿ, ಮೊಮ್ಮಗ ಶಾಸಕನಾಗಿರುತ್ತಾನೆ. ಅಂಥ ಸ್ಥಿತಿಯನ್ನು ಪ್ರತಿನಿತ್ಯ ನೋಡುತ್ತಲೇ ಇದ್ದೇವೆ. ಆದರೆ ಟಿ.ಮರಿಯಪ್ಪನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ ಹೊರತು, ತಮ್ಮ ಮನೆಗಾಗಿ, ಕುಟುಂಬಕ್ಕಾಗಿ ಹೋರಾಟ ಮಾಡಲಿಲ್ಲ. ಅವರ ಚಿಂತನೆಗಳು ಉತ್ತಮವಾಗಿದ್ದವು ಎಂದು ಮಾಜಿ ಸಚಿವ ಹಾಗೂ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ನಡೆದ ಮೈಸೂರು ಚಲೋ ಅಥವಾ ಅರಮನೆ ಚಲೋ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ರಾಜಕಾರಣಿಗಳ ಕಾವ್ಯ ಹಾಗೂ ಚಿಂತನಾ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಲಿದ್ದು, ಅವರಿಂದ ಹೊಸ ಚೈತನ್ಯ ಮೂಡಲಿದೆ ಎಂದು
ಇಂದಿನ ರಾಜಕಾರಣಿಗಳನ್ನು ನೋಡಿದರೆ ಅಸಡ್ಡೆ ಮನೋಭಾವ ಬರುವಂಥ ಸ್ಥಿತಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ರಾಜ್ಯದಲ್ಲಿ ಪ್ರಬಲ ಮಂತ್ರಿ ಮಂಡಲದಲ್ಲಿ ಕೆಲಸ ಮಾಡಿದ ಟಿ.ಮರಿಯಪ್ಪ ಅವರು ಮಾದರಿಯಾಗುತ್ತಾರೆ. ಲಾಲ್ ಬಹದ್ದೂರು ಶಾಸ್ತ್ರಿ ಹಾಗೂ ಟಿ.ಮರಿಯಪ್ಪ ಅವರು ಮನೆ ಇಲ್ಲದೆ ರಾಜಕೀಯದಲ್ಲಿ ಮಾಡಿದ್ದಾರೆ. ಅದು ಮಾದರಿಯಾಗುತ್ತದೆ ಎಂದರು.
ಹಿಂದೆ ತತ್ವ ಸಿದ್ಧಾಂತ ರಾಜಕಾರಣವಿತ್ತು. ಈಗ ಅವರ ಇಡೀ ಸಮಾಜವೇ ರಾಜಕಾರಣ ಮಾಡುವ ಸ್ಥಿತಿ ಎದುರಾಗಿದೆ. ಟಿ.ಮರಿಯಪ್ಪನಂಥವರು ಇಡೀ ರಾಜಕಾರಣ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಆ ರೀತಿಯ ರಾಜಕಾರಣ ಈಗ ಪ್ರಸ್ತುವಾಗಿದೆ. ಆದರೆ ಪರಿಸ್ಥಿತಿಗಳು ಆಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಚಲೋ ಚಳವಳಿ; ಐತಿಹಾಸಿಕ ಮಹತ್ವದ ವಿಷಯದ ಬಗ್ಗೆ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ಟಿ.ಮರಿಯಪ್ಪ; ವ್ಯಕ್ತಿ, ವ್ಯಕ್ತಿತ್ವ ಹಾಗೂ ಸಾಧನೆ ವಿಷಯದ ಬಗ್ಗೆ ವಕೀಲ ಜೀರಹಳ್ಳಿ ರಮೇಶಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ, ನಿವೃತ್ತ ಪ್ರಾಧ್ಯಾಪಕ ಹುಲ್ಕೆರೆ ಮಹದೇವು, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ದೊಡ್ಡಯ್ಯ ಉಪಸ್ಥಿತರಿದ್ದರು.