ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಿಂದ ಸಂಸತ್ ಗೆ ನನ್ನನ್ನು ಆಯ್ಕೆ ಮಾಡಿದರೆ ಕಾವೇರಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುತ್ತೇನೆ ಎಂದಿದ್ಧಾರೆ, ಆದರೆ ಅವರು ಇದುವರೆಗಿನ ರಾಜಕಾರಣದಲ್ಲಿ ಹೇಳಿದಂತೆ ನಡೆದುಕೊಂಡು, ಭರವಸೆ ಈಡೇರಿಸಿದ್ದರೆ ಸಾಬೀತುಪಡಿಸಲಿ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಬಿಡುಗಡೆ ಸಂಬಂಧ ತಾವು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕನ್ನಂಬಾಡಿ ಕಟ್ಟೆಯ ಕೀ ನನ್ನ ಜೇಬಿನಲ್ಲಿಲ್ಲ ದೆಹಲಿಯಲ್ಲಿದೆ ಎಂದಿದ್ದೀರಿ. ಈಗ ನೀವು ಆ ದೆಹಲಿಯ ದೊರೆಗಳ ಜೊತೆಗೆ ಸೇರಿಕೊಂಡಿದ್ದೀರಿ. ಚುನಾವಣೆಗೂ ಮುನ್ನ ಕೀ ಪಡೆದುಕೊಂಡು ಬಂದು ನೀವೇ ನಾಲೆಗಳಿಗೆ ನೀರು ಬಿಡಿಸಿ ಎಂದು ಆಗ್ರಹಿಸಿದರು.
ಈ ಹಿಂದೆ ತಾವು ಕನಕಪುರ, ರಾಮನಗರದಲ್ಲಿ ಲೋಕಸಭಾ ಸದಸ್ಯರಾಗಿದ್ದಾಗ, ಈ ಸಮಸ್ಯೆಗಳು ಕಾಣಲಿಲ್ಲವೆ? ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದೀರಿ. ಆವಾಗ ಈ ಸಮಸ್ಯೆಗಳು ಕಾಣಲಿಲ್ಲವೇ? ನಿಮ್ಮ ತಂದೆಯವರು ಪ್ರಧಾನಮಂತ್ರಿಗಳಾಗಿ ಮಾಡಲಾಗದ್ದನ್ನು ನೀವು ಮಂಡ್ಯ ಲೋಕಸಭೆಯಿಂದ ಗೆದ್ದರೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಒಂದೊಂದು ಚುನಾವಣೆಗೆ ಒಂದೊಂದು ಸುಳ್ಳು ಭರವಸೆ ಕೊಡುತ್ತಾ ಬಂದಿದ್ದೀರಿ. 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಹುಮತ ಸಿಗದಿದ್ದರೆ ಪಕ್ಷವನ್ನೆ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೀರಿ. ಆ ಮಾತು ಏನಾಯ್ತು? ಮೈಸೂರು ಸಕ್ಕರೆ ಕಾರ್ಖಾನೆಯನ್ನು ಹೊಸದಾಗಿ ಕಟ್ಟುತ್ತೇನೆ ಎಂದಿದ್ದೀರಿ ಆ ಮಾತು ಏನಾಯ್ತು? ಅಶೋಕ್ ಜಯರಾಂ ಅವರನ್ನು ಲೋಕಸಭೆಗೆ ಕಳಿಸುತ್ತೇನೆ ಅಂತ ಹೇಳಿದ್ದೀರಿ ಆ ಮಾತು ಏನಾಯ್ತು? 2004ರ ವಿಧಾನಸಭಾ ಚುನಾವಣೆಯಲ್ಲಿ ಚಂದಗಾಲು ಎನ್.ಶಿವಣ್ಣ ಅವರನ್ನು ಮುಂದಿನ ಚುನಾವಣೆಯಲ್ಲಿ ವಿಧಾನಸಭೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದ ನೀವು, ಇವುಗಳಲ್ಲಿ ಯಾವುದನ್ನಾದರೂ ಈಡೇರಿಸಿದ್ದೀರಾ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ರಾಮಕೃಷ್ಣ, ಚಲುವರಾಜ್, ದೊರೈರಾಜ್, ಶಿವರುದ್ರ ಹಾಗೂ ವರಲಕ್ಷ್ಮಿ ಉಪಸ್ಥಿತರಿದ್ದರು.