ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತ್ಯ ವಲಯದ ಡಾ.ರಾಗೌ ಕಾವ್ಯನಾಮದಿಂದ ಜನಪ್ರಿಯರಾದ ಡಾ.ರಾಮೇಗೌಡ ಅವರನ್ನು ಆಯ್ಕೆ ಮಾಡುವಂತೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಒತ್ತಾಯಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗೌ ಅವರು ಇದುವರೆಗೂ 85 ಕೃತಿಗಳನ್ನು ರಚಿಸಿದ್ದಾರೆ. ಕವಿಯಾಗಿ, ವಿಮರ್ಶಕರಾಗಿ, ಜಾನಪದ ವಿದ್ಯಾಂಸರಾಗಿ, ನಾಟಕಕಾರರಾಗಿ, ಗ್ರಂಥ ಸಂಪಾದಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯವರೇ ಆದ ಇವರು ಮದ್ದೂರು ತಾಲೂಕಿನ ಈರೇಗೌಡನದೊಡ್ಡಿ ಗ್ರಾಮದವರಾಗಿದ್ದು, ತಮ್ಮ 5ನೇ ತರಗತಿ ಶಿಕ್ಷಣದವರೆಗೆ ಮಾತ್ರ ಸ್ವಗ್ರಾಮದಲ್ಲಿದ್ದರು. ನಂತರ ಅವರ ಶೈಕ್ಷಣಿಕ ಹಾಗೂ ವೃತ್ತಿ ಜೀವನ ಮೈಸೂರಿನಲ್ಲಿ ನಡೆಸಿದ್ದು, ಸಾಹಿತ್ಯಿಕವಾಗಿ ರಾಜ್ಯಕ್ಕೆ ತಮ್ಮ ಬಹುತೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ.ರಾಮೇಗೌಡರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ಎಂದು ಹೇಳಿದರು.
ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಕನ್ನಡ ಸಮ್ಮೇಳನಗಳನ್ನು ನಡೆಸಿ ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಎಂದು ಸಾಹಿತ್ಯೇತರರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ, ಕಾರಸವಾಡಿ ಮಹದೇವು ಇದ್ದರು.