ಜೆಡಿಎಸ್ನ ಒಂಬತ್ತು ಶಾಸಕರು ಕಾಂಗ್ರೆಸ್ ಸೇರಿಲು ಸಿದ್ದರಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಕುಮಾರಸ್ವಾಮಿ ಅವರ ರಾಜಕೀಯ ನಡೆಗೆ ಜೆಡಿಎಸ್ನ ಕೆಲವು ಶಾಸಕರು ಬೇಸತ್ತಿದ್ದಾರೆ. ಅಧಿಕಾರದ ಆಸೆ ಇಲ್ಲದೆ ಕಾಂಗ್ರೆಸ್ ಸೇರಲು 9 ಶಾಸಕರು ಸಿದ್ಧರಾಗಿದ್ದಾರೆ” ಎಂದು ಹೇಳಿದ್ದಾರೆ.
“ಅವರೆಲ್ಲರೂ ಪಕ್ಷದ ಸಿದ್ದಾಂತ ಒಪ್ಪಿ ಬರುವುದಾದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ. ಅಂತಹ ವ್ಯವಸ್ಥೆಯೂ ನಮ್ಮಲ್ಲಿಲ್ಲ” ಎಂದಿದ್ದಾರೆ.
”ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಕೆಲವೇ ದಿನಗಳಲ್ಲಿ ಜೆಡಿಎಸ್ ಮೂರು ಭಾಗವಾಗಲಿದೆ. ಜೆಡಿಎಸ್ ಮುಗಿದ ಅಧ್ಯಾಯ. ಆ ಪಕ್ಷವನ್ನು ಯುಪಿಎ ಅಥವಾ ಎನ್ಡಿಎ ಒಕ್ಕೂಟಗಳು ಕರೆಯುತ್ತಿಲ್ಲ” ಎಂದು ಕುಟುಕಿದ್ದಾರೆ.