ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರ ನೇತೃತ್ವದಲ್ಲಿ ಬುಧವಾರ ಮೂವರು ಕಾಂಗ್ರೆಸ್ಸಿಗರು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಜಾ.ದಳಕ್ಕೆ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ಸ್ ತೊರೆದು ಮರಳಿ ತವರನ್ನು ಸೇರಿದರು.
ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ದೊರೆ ಹಾಗೂ ಮಂಜು ಅವರು ಜೆಡಿಎಸ್ ಸೇರ್ಪಡೆಯಾಗಿದ್ದು, ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಜಫ್ರುಲ್ಲಾ ಖಾನ್ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ನಂತರ ಮಾತನಾಡಿದ ಅವರು, ಕಳೆದ ಬಾರಿ ನಾನು ರಾಮಚಂದ್ರ ಅವರಿಗೆ ಸಿ ಫಾರಂ ತಪ್ಪಿಸಿ ತಪ್ಪು ಮಾಡಿದ್ದೆ. ಈ ಬಾರಿ ಆ ತಪ್ಪನ್ನು ಸರಿ ಪಡಿಸಿಕೊಂಡಿದ್ದೇನೆ ಎಂದರು. ಪಕ್ಷಕ್ಕೆ ಈ ಮೂವರ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಿದೆ. ಪಕ್ಷದಲ್ಲೆ ಇದ್ದವರು ಪಕ್ಷ ತೊರೆದಿದ್ದರು. ಈಗ ಮರಳಿರುವುದು ಸಂತಸ ತಂದಿದೆ ಎಂದು ನುಡಿದರು.
ಸಿದ್ದರಾಮೇಗೌಡ ಮಾತನಾಡಿ, ನನಗೆ ದೇವೆಗೌಡರು ಮತ್ತು ಕುಮಾರಸ್ವಾಮಿ ಅವರು ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದರು. ಅವರ ಆಹ್ವಾನ ಮನ್ನಿಸಿ ತವರಿಗೆ ಮರಳಿದ್ದೇನೆ. ಪಕ್ಷದ ಅಭ್ಯರ್ಥಿ ರಾಮಚಂದ್ರ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ನುಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರು, ದೊರೆ, ಮಂಜು, ಮಹಮದ್, ಷಡಕ್ಷರಿ, ಯೋಗೇಶ್ ಇತರರಿದ್ದರು.