Monday, October 28, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ ಮಾಡಿ, ಪೊಲೀಸರಿಗೆ ಶರಣಾದ ಆರೋಪಿ !

ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಲಗಿದ್ದ ವ್ಯಕ್ತಿಯೋರ್ವನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಚಿನಕುರಳಿ ಗ್ರಾಮದ ಅರವಿಂದ (24) ಕೊಲೆಯಾದ ವ್ಯಕ್ತಿ. ಈತನನ್ನು ಸಂಬಂಧಿಯಾದ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನ ತಿರುಮಲಪುರ ಗ್ರಾಮದ ವಿಜಯ್ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಘಟನೆ ವಿವರ

ಕೊಲೆಯಾದ ಅರವಿಂದ ಮತ್ತು ವಿಜಯ್ ಅವರು ಸೋದರ ಸಂಬಂಧಿಗಳಾಗಿದ್ದು, ಆರೋಪಿ ವಿಜಯ್ ಒಂದು ತಿಂಗಳ ಹಿಂದಷ್ಟೇ ಸ್ವಗ್ರಾಮದಿಂದ ಚಿನಕುರಳಿಗೆ ಬಂದು ಅರವಿಂದನ ಜೊತೆಯಲ್ಲಿ ವಾಸವಿದ್ದ. ಚಿನಕುರಳಿ ಗ್ರಾಮದ ರಮೇಶ್ ಎಂಬುವವರಿಗೆ ಸೇರಿದ ಕ್ವಾರಿಯಲ್ಲಿ ಸೈಜ್ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದ.

ಅರವಿಂದ, ವಿಜಯ್‌ಗೆ ಕಳೆದ ಒಂದು ವರ್ಷದ ಹಿಂದೆ ಕೊಟ್ಟಿದ್ದ ರೂ.75ಸಾವಿರ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ಅರವಿಂದ, ವಿಜಯ್ ಹೆಸರಿನಲ್ಲಿ ಸಾಲದ ಮೇಲೆ ಬೈಕ್ ಖರೀದಿಸಿ, ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಅರವಿಂದನಿಂದ ಬೈಕ್ನ್ನು ವಿಜಯ್ ಕಿತ್ತುಕೊಂಡಿದ್ದ. ಈ ವಿಚಾರಕ್ಕೆ, ಸಂಬಂಧಿಸಿದಂತೆ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.

ಅರವಿಂದನ ಪತ್ನಿ ಗರ್ಭಿಣಿಯಾದ ಕಾರಣ ತವರು ಮನೆಗೆ ಹೋಗಿದ್ದರು. ಆರೋಪಿ ತನ್ನ ಮತ್ತೊಬ್ಬ ಸ್ನೇಹಿತ ಏಳುಮಲೈನೊಂದಿಗೆ ಅರವಿಂದನ ಮನೆಯಲ್ಲಿ ಒಟ್ಟಿಗೆ ಮಲಗಿದ್ದರು. ಈ ವೇಳೆ ಕಲ್ಲು ಹೊಡೆಯಲು ಬಳಸುತ್ತಿದ್ದ ಸುತ್ತಿಗೆಯಿಂದ ಗಾಢ ನಿದ್ರೆಯಲ್ಲಿದ್ದ ಅರವಿಂದನ ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದಾನೆ. ಬಳಿಕ ಬೀಗ ಜಡಿದು ಜತೆಯಲ್ಲಿದ್ದ ಏಳುಮಲೈಯೊಂದಿಗೆ ಬೆಳ್ಳೂರು ಕ್ರಾಸ್ ಪೊಲೀಸ್ ಠಾಣೆಗೆ ಹೋಗಿ ಆರೋಪಿ ವಿಜಯ್ ನಡೆದ ವಿಚಾರವನ್ನು ತಿಳಿಸಿ ಶರಣಾಗಿದ್ದಾನೆ.

ಪಾಂಡವಪುರ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!