ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಅದಮ್ಯ ರಂಗಶಾಲೆ ಜಂಟಿಯಾಗಿ ಕೊಡಮಾಡುವ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಗೆ ವಿವಿಧ ಕ್ಷೇತ್ರದ ಆರು ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಹಾಗೂ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಸಾಹಿತಿ ಮತ್ತು ಅಂಕಣಕಾರ ಮಿರ್ಲೆ ಚಂದ್ರಶೇಖರ್ (ಸಾಹಿತ್ಯ ಕ್ಷೇತ್ರ), ವಿಜಯವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರ ಆರ್. ಕೃಷ್ಣ (ಪತ್ರಿಕೋದ್ಯಮ ಕ್ಷೇತ್ರ), ಕನ್ನಿಕಾ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಎಂ.ಸಿ. ಚೋಂದಮ್ಮ (ಶಿಕ್ಷಣ ಕ್ಷೇತ್ರ), ಜಿಲ್ಲಾ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ (ಸಮಾಜ ಸೇವಾ ಕ್ಷೇತ್ರ), ವಿಸ್ಮಯ ಪ್ರಕಾಶನದ ಮುಖ್ಯಸ್ಥ ಹಾಲತಿ ಲೋಕೇಶ್ (ಪುಸ್ತಕ ಪ್ರಕಾಶನ), ಮೈಸೂರು ತಾಲ್ಲೂಕು ಶಿಕ್ಷಕರ ಸಂಘದ ನಿರ್ದೇಶಕ ಜಿ. ಮಹೇಶ್ (ಸಂಘಟನಾ ಕ್ಷೇತ್ರ) ಅವರು ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯ ಸಾಧಕರಾಗಿದ್ದಾರೆ.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಅಕ್ಡೋಬರ್ 6 ರಂದು ಸಂಜೆ 5-30 ಗಂಟೆಗೆ ನಡೆಯಲಿರುವ ಸಮಾರಂಭವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ವಿಶ್ರಾಂತ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಭಿನಂದನಾ ಮತ್ತು ಆಶಯ ನುಡಿಗಳನ್ನಾಡುವರು.
ಬಳಿಕ ಖ್ಯಾತ ಕತೆಗಾರ ವಸುಧೇಂದ್ರ ಅವರ ಸಣ್ಣಕತೆಯ ಆಧಾರಿತ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ನಾಟಕ ಪ್ರದರ್ಶನ ನಡೆಯಲಿದೆ. ವಿನೋದ್ ಸಿ. ಮೈಸೂರು ಅವರು ಈ ಕತೆಯನ್ನು ರಂಗರೂಪಕ್ಕೆ ಅಳವಡಿಸಿ ನಿರ್ದೇಶನ ಮಾಡಿದ್ದಾರೆ. ನಾಟಕಕ್ಕೆ ನೂರು ರೂಪಾಯಿ ಪ್ರೋತ್ಸಾಹ ಧನವಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.