ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎರಡನೇ ಬಾರಿಗೆ ಸೈನಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪಂಚಕುಲದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಎನ್ಡಿಎ ಮಿತ್ರ ಪಕ್ಷ ಆಡಳಿತ ರಾಜ್ಯಗಳ ಸಿಎಂಗಳು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಮಾಣವಚನ ಬೋಧಿಸಿದರು. ಸೈನಿ ಜೊತೆ ಅಂಬಾಲಾ ಕಂಟೋನ್ಮೆಂಟ್ ಶಾಸಕ ಅನಿಲ್ ವಿಝ್, ಇಸ್ರಾನಾ ಶಾಸಕ ಕ್ರಿಶನ್ ಲಾಲ್ ಪನ್ವಾರ್, ಬಾದಶಹಪುರ್ ಶಾಸಕ ರಾವ್ ನರಬೀರ್ ಸಿಂಗ್, ತೋಷಮ್ ಶಾಸಕಿ ಶ್ರುತಿ ಚೌಧರಿ, ಅಟೆಲಿ ಶಾಸಕಿ ಆರ್ತಿ ಸಿಂಗ್ ರಾವ್ ಮತ್ತು ರಾಡೌರ್ ಶಾಸಕ ಶ್ಯಾಮ್ ಸಿಂಗ್ ರಾಣಾ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಅಕ್ಟೋಬರ್ 5ರಂದು ಪ್ರಕಟಗೊಂಡ ವಿಧಾನಸಭೆ ಚುನಾವಣೆಯ ಫಲಿತಾಂಶದ ಪ್ರಕಾರ, ಒಟ್ಟು 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಬಿಜೆಪಿಯಿಂದ 48 ಸದಸ್ಯರು ಆಯ್ಕೆಯಾಗಿದ್ದಾರೆ. ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸ್ಥಾನಗಳು ಲಭ್ಯವಿದ್ದು, ಬಿಜೆಪಿ ಎರಡು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಚುನಾವಣೆ ಬಳಿಕ ಇಬ್ಬರು ಪಕ್ಷೇತರ ಶಾಸಕರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಪಕ್ಷದ ಶಾಸಕರ ಬಲ 50ಕ್ಕೇರಿದೆ.