ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಇತ್ತಿಚೆಗಷ್ಟೆ ಅಧಿಕಾರ ಸ್ವೀಕರಿಸಿದ್ದ ಅತಿಶಿ ಮಾರ್ಲಿನಾ ಅವರ ವಸ್ತುಗಳನ್ನು ಲೆಫ್ಟಿನೆಂಟ್ ಗವರ್ನರ್ ಆದೇಶದ ಮೇರೆಗೆ ಮುಖ್ಯಮಂತ್ರಿಯ ಸರ್ಕಾರಿ ಬಂಗಲೆಯಿಂದ ಹೊರಹಾಕಲಾಗಿದೆ ಎಂದು ಎಎಪಿ ಬುಧವಾರ ಆರೋಪಿಸಿದೆ. ಅತಿಶಿ ಅವರು ತಮ್ಮ ಅಧಿಕೃತ ನಿವಾಸಕ್ಕೆ ತೆರಳಿದ ಎರಡು ದಿನಗಳ ನಂತರ ಅವರನ್ನು ಹೊರಹಾಕಲಾಗಿದೆ ಎಂದು ವರದಿಯಾಗಿದೆ. ದೆಹಲಿ ಸಿಎಂ
ಎಎಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸ ಸಂಘರ್ಷ ಪ್ರಾರಂಭವಾಗುವ ಸೂಚನೆಯಿದ್ದು, ದೆಹಲಿ ಮುಖ್ಯಮಂತ್ರಿ ಕಚೇರಿಯು ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ಅತಿಶಿ ಅವರ ವಸ್ತುಗಳನ್ನು “ಬಿಜೆಪಿಯ ಆಜ್ಞೆಯ ಮೇರೆಗೆ” ಸರ್ಕಾರಿ ಬಂಗಲೆಯಿಂದ “ಬಲವಂತವಾಗಿ ತೆಗೆದುಹಾಕಿದ್ದಾರೆ” ಎಂದು ಎಎಪಿ ಆರೋಪಿಸಿದೆ.
ಅದಾಗ್ಯೂ, ದೆಹಲಿ ಮುಖ್ಯಮಂತ್ರಿ ಕಚೇರಿಯ ಆರೋಪಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿ ಇನ್ನೂ ಪ್ರತಿಕ್ರಿಯಿಸಿಲ್ಲ. ಬಂಗಲೆಯು ವಿವಾದವು ಎಎಪಿ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಘರ್ಷಣೆಯನ್ನು ಹುಟ್ಟುಹಾಕಿದೆ. ಎರಡೂ ಪಕ್ಷಗಳು ತಮ್ಮ ಪ್ರಕರಣವನ್ನು ಬೆಂಬಲಿಸಲು ದಾಖಲೆಗಳನ್ನು ಮುಂದಿಟ್ಟಿವೆ. ಬಂಗಲೆಯನ್ನು ಬಿಜೆಪಿ ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ಸರ್ಕಾರಿ ನಿವಾಸದಿಂದ ಹಲವಾರು ಪೆಟ್ಟಿಗೆಗಳು ಮತ್ತು ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ದೃಶ್ಯಗಳು ವೈರಲ್ ಆಗಿವೆ. ನಿವಾಸಕ್ಕೆ ಡಬಲ್ ಬೀಗ ಹಾಕಲಾಗಿದ್ದು, ಕೀಗಳನ್ನು ಹಸ್ತಾಂತರಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ಸರಿಯಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿವಾಸವನ್ನು ತೆರವು ಮಾಡಲಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿ ಅತಿಶಿ ಅವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ತೆಗೆದುಹಾಕಿದ್ದಾರೆ” ಎಂದು ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ.
ದೆಹಲಿಯ ಈ ಹಿಂದಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅದನ್ನು ಬಂಗಲೆ ಖಾಲಿ ಮಾಡಿದ ಕೆಲವು ದಿನಗಳ ನಂತರ, ಉತ್ತರ ದೆಹಲಿಯ ಸಿವಿಲ್ ಲೈನ್ಸ್ನಲ್ಲಿರುವ ಫ್ಲಾಗ್ಸ್ಟಾಫ್ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 6ಕ್ಕೆ ಅತಿಶಿ ಸೋಮವಾರ ಸ್ಥಳಾಂತರಗೊಂಡಿದ್ದರು.
ಆತಿಶಿ ಅವರು ಸ್ಥಳಾಂತರಗೊಂಡ ಕೆಲವು ಗಂಟೆಗಳ ನಂತರ, ಬಂಗಲೆಯನ್ನು ಹೊಸ ಹಂಚಿಕೆಗಾಗಿ ಲೋಕೋಪಯೋಗಿ ಇಲಾಖೆ ಅಥವಾ ಪಿಡಬ್ಲ್ಯುಡಿಗೆ ಇನ್ನಷ್ಟೆ ಹಸ್ತಾಂತರಿಸಬೇಕಾಗಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು.
ದೆಹಲಿ ಅಬಕಾರಿ ಪ್ರಕರಣದಲ್ಲಿ ಸುಮಾರು 6 ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದಿದ್ದ ಮಾಜಿ ಮುಖ್ಯಮಂತ್ರಿ ಅರಂವಿದ್ ಕೇಜ್ರಿವಾಲ್ ಅವರು, ಪ್ರಕರಣದಲ್ಲಿ ಜಾಮೀನು ದೊರೆತು ಬಿಡುಗಡೆಯಾದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾಗಿ ಕೆಲವೆ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವೆಯಾಗಿದ್ದ ಆತಿಶಿ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.