Friday, March 29, 2024

ಪ್ರಾಯೋಗಿಕ ಆವೃತ್ತಿ

ಜನಪರ ಕೆಲಸಗಳೇ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಅಚ್ಚಳಿಯದೆ ಉಳಿಯಲು ಕಾರಣ : ಎನ್.ಚಲುವರಾಯಸ್ವಾಮಿ

ದೇಶದಲ್ಲಿ ಆನೇಕ ರಾಜರು ಆಳ್ವಿಕೆ ಮಾಡಿದ್ದರೂ, ಮೈಸೂರು ಪ್ರಾಂತ್ಯದ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಂದಿಗೂ ಅಚ್ಚಳಿಯದೆ ಉಳಿದಿರುವುದಕ್ಕೆ ಅವರು ಮಾಡಿದ ಜನಪರ‌ ಕೆಲಸಗಳೇ ಕಾರಣ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು‌.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಜನಾನುರಾಗಿ ಆಗಿದ್ದವರು. ಮೈಸೂರು ಪ್ರಾಂತ್ಯದ ದೈವಸ್ವರೂಪರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.

ಪ್ರತಿಮೆ ಸ್ಥಾಪನೆ
ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆಗೆ ಇರುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ‌ ನಡೆಸಿ ಪರಿಹರಿಸಿ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಾಲ್ವಡಿ ಅವರ ಜನೋಪಯೋಗಿ ಕೆಲಸಗಳ ಫಲವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕ ರಾಜ್ಯದ ಜನರು ಉತ್ತಮ ಮೂಲಭೂತ ವ್ಯವಸ್ಥೆಗಳೊಂದಿಗೆ ಜೀವನ ನಡೆಸುತ್ತಿದ್ದಾರೆ ಎಂದರು.

ನಾಲ್ವಡಿ ಅವರು ಸರ್ಕಾರ ಎಂಬ ವ್ಯವಸ್ಥೆ ಪ್ರಾರಂಭವಾಗುವ ಮೊದಲೇ ರಾಜರ ಆಳ್ವಿಕೆಯಲ್ಲಿ ಶಾಲೆ, ಕಾಲೇಜು,ಬ್ಯಾಂಕ್,ನೀರಾವರಿ, ಕಾರ್ಖಾನೆಗಳು, ರೈಲ್ವೆ ವ್ಯವಸ್ಥೆಯನ್ನು ಮಾಡಿ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದರು‌. ದೇವದಾಸಿ, ಬಸವಿ ಪದ್ಧತಿಯಂತಹ ಸಮಾಜದ ಪಿಡುಗನ್ನು ತೊಡೆದು ಹಾಕಿದರು ಎಂದರು.

ನಾಲ್ವಡಿ ಅವರ ಸಾಧನೆಗಳು ಅಪಾರವಾಗಿವೆ. ಮಂಡ್ಯ ಜಿಲ್ಲೆಯಲ್ಲಿರುವ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಣದ ಕೊರತೆಯಿಂದ ತಮ್ಮ ಬಳಿಯಿದ್ದ ಚಿನ್ನವನ್ನು ಅಡವಿಟ್ಟರು. ಅವರ ತ್ಯಾಗವನ್ನು ಸದಾ ನೆನೆಯಬೇಕು ಎಂದರು.

ಕಡ್ಡಾಯ ಶಿಕ್ಷಣ
ಸಾಮಾಜಿಕ ಇತಿಹಾಸಕಾರರಾದ ಎ.ಎಸ್. ಧರ್ಮೇಂದ್ರಕುಮಾರ್ ಅವರು ಮಾತನಾಡಿ, ರಾಜರ ಕಾಲದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ವಯಸ್ಕರಿಗೆ ಶಿಕ್ಷಣಕ್ಕಾಗಿ ರಾತ್ರಿ ವೇಳೆ ಶಿಕ್ಷಣವನ್ನು‌ ಮೊದಲ ಬಾರಿಗೆ ಜಾರಿಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಾಲೆಗೆ ಹೋಗಲು ಗೋಷ ಟಾಂಗಾ, ಕುರುಡರಿಗೆ ಬ್ರೈಲ್ ಲಿಪಿ ಹೀಗೇ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರು ವಿವಿಧ ರೀತಿಯ ಬದಲಾವಣೆಗಳನ್ನು ತಂದರು. ದೇಶಕ್ಕೆ ಮೊಟ್ಟ‌ಮೊದಲ ಬಾರಿಗೆ‌ ಮತದಾನ ಪ್ರಕ್ರಿಯೆಯನ್ನು‌ ಪರಿಚಯಿಸಿಕೊಟ್ಟರು ಎಂದರು.

ನಾಲ್ವಡಿ ಹೆಸರಿಡಿ
ಮಂಡ್ಯ ಶಾಸಕ ಪಿ.ರವಿ ಕುಮಾರ್ ಮಾತನಾಡಿ, ಕನ್ನಂಬಾಡಿ ಕಟ್ಟಿ ಮಂಡ್ಯ ಜಿಲ್ಲೆಯ ಕೃಷಿಗೆ ನೀರನ್ನು ಹಾಗೂ ಮೈಷುಗರ್ ಕಾರ್ಖಾನೆ ನಿರ್ಮಿಸಿ‌ ಸಕ್ಕರೆ ನಾಡು ಹೆಸರನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಇಡುವಂತೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವುದಾಗಿ‌ ತಿಳಿಸಿದರು.

ರಕ್ತದಾನ ಶ್ಲಾಘನೀಯ

ನಾಲ್ವಡಿ ಅವರ ಜಯಂತಿ ದಿನದಂದು ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಕೆಲಸ. ಇಂತಹ‌ ಸಮಾಜಮುಖಿ ಕೆಲಸಗಳು‌ ಹೆಚ್ಚು ಹೆಚ್ಚು ನಡೆಯಬೇಕು ಎಂದು ಮೈಸೂರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಾಲ್ವಡಿ ಕೃಷ್ಣರಾಜ‌ ಒಡೆಯರ್ ಅವರ ಕೆಲಸಗಳನ್ನು ಸ್ಮರಿಸಿ ಜನರು ಹಾಗೂ ಸರ್ಕಾರ ನಾಲ್ವಡಿ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಅವರ ಕಾಲದಲ್ಲಿ ನಿರ್ಮಾಣವಾದ ಕಾರ್ಖಾನೆಗಳನ್ನು ಅಭಿವೃದ್ಧಿ ಪಡಿಸಿ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಜಿಲ್ಲಾಧಿಕಾರಿ ಡಾ; ಹೆಚ್.ಎನ್ ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಎನ್. ಯತೀಶ್, ಮೀರಾ ಶಿವಲಿಂಗಯ್ಯ, ತಗ್ಗಹಳ್ಳಿ ವೆಂಕಟೇಶ್, ಸುರೇಶ್, ನಟರಾಜ್, ಲಂಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!