ಕೃಷ್ಣರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿಯಾಗಿ ಕಳೆದ 3 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಕಾಳಪ್ಪ ವಠಾರ ಅವರು ಇಂದು ಮಧ್ಯಾಹ್ನ ಕರ್ತವ್ಯ ನಿರತರಾಗಿದ್ದಾಗ ತಮ್ಮ ಕೊಠಡಿಯಲ್ಲಿ ಕುಸಿದು ಬಿದ್ದರು.
ಕೂಡಲೇ ಕಛೇರಿಯ ಸಿಬ್ಬಂದಿಗಳು ಕೆ.ಆರ್. ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಕರೆದೊ ಯ್ಯುವ ಮಾರ್ಗದ ಮಧ್ಯದಲ್ಲಿಯೇ ನಿಧನರಾದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್ ಮುಖ್ಯಾಧಿಕಾರಿ ರಾಜು ಕಾಳಪ್ಪ ವಠಾರ ತೀವ್ರ ಹೃದಯಾಘಾತದಿಂದ ಮೃತರಾಗಿರುವುದನ್ನು ಖಚಿತ ಪಡಿಸಿದರು.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಆಗಮಿಸಿದ್ದ ರಾಜು ಕೆ.ವಠಾರ ಅವರು ತಮ್ಮ ದಕ್ಷ ಪ್ರಾಮಾಣಿಕ ಆಡಳಿತದಿಂದ ಹೆಸರು ಗಳಿಸಿದ್ದರು. ಜಡ್ಡು ಗಟ್ಟಿದ್ದ ಪುರಸಭೆ ಆಡಳಿತಕ್ಕೆ ಕಾಯಕಲ್ಪ ನೀಡಿ ಪಾರದರ್ಶಕವಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದ ರಾಜು ವಠಾರ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.
ಸಂತಾಪ
ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನಿರ್ದೇಶಕಿ ತುಷಾರಮಣಿ, ಪುರಸಭೆ ಸದಸ್ಯರಾದ ಹೆಚ್. ಆರ್.ಲೋಕೇಶ್, ಡಿ. ಪ್ರೇಮಕುಮಾರ್, ಹೆಚ್.ಎನ್. ಪ್ರವೀಣ್, ರವೀಂದ್ರಬಾಬು, ಪುರಸಭೆ ಕಛೇರಿ ವ್ಯವಸ್ಥಾಪಕಿ ಕಾಂಚನ, ಕಂದಾಯಾಧಿಕಾರಿ ರವಿಕುಮಾರ್, ಹಿರಿಯ ಆರೋಗ್ಯ ಪರಿವೀಕ್ಷಕರಾದ ಬಸವರಾಜ್, ಅಶೋಕ್, ಮೇಸ್ತ್ರಿ ಮುತ್ತಯ್ಯ ಸೇರಿದಂತೆ ನೂರಾರು ಜನರು ತೀವ್ರ ಸಂತಾಪ ಸೂಚಿಸಿದ್ದಾರೆ.