ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಇತ್ತಿಚೆಗಿನ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ ಚಂದ್ರಶೇಖರ್ ಅವರು ‘ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ’ ಎಂದು ಹೇಳಿದ್ದಾರೆ.
ಸೆಪ್ಟಂಬರ್ 28 ರಂದು ಎಸ್ಐಟಿ ಸಿಬ್ಬಂದಿಗೆ ಪತ್ರ ಬರೆದಿರುವ ಚಂದ್ರಶೇಖರ್ ಅವರು, ಕೇಂದ್ರ ಸಚಿವರನ್ನು “ಎಸ್ಐಟಿಯ ಅಪರಾಧ ಸಂಖ್ಯೆ 16/14” ಆರೋಪಿ ಎಂದು ಉಲ್ಲೇಖಿಸಿದ್ದಾರೆ ಮತ್ತು ಕುಮಾರಸ್ವಾಮಿ ಅವರು “ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳು ಮತ್ತು ಬೆದರಿಕೆಗಳನ್ನು” ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಾರ್ಜ್ ಬರ್ನಾರ್ಡ್ ಶಾ ಉಲ್ಲೇಖವನ್ನು ಉಲ್ಲೇಖಿಸಿದ ಅವರು “ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಇಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿ ಕೂಡಾ ಅದನ್ನು ಇಷ್ಟಪಡುತ್ತದೆ” ಎಂದು ಹೇಳಿದ್ದಾರೆ. ನಮ್ಮ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
“ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ಕರ್ತವ್ಯ ನಿರ್ವಹಿಸುವ ನಮ್ಮನ್ನು ತಡೆಯುವಂತೆ ಆಗಬಾರದು” ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಂದಿ
ಬೆಂಗಳೂರಿನ ಗಂಗೇನಹಳ್ಳಿಯಲ್ಲಿ 1.1 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ಕುಮಾರಸ್ವಾಮಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಚಂದ್ರಶೇಖರ್ ಅವರು ಕಾಂಗ್ರೆಸ್ ರಕ್ಷಣೆಯಲ್ಲಿ ಭ್ರಷ್ಟಾಚಾರ ಮತ್ತು ಪುರಾವೆಗಳ ಕಟ್ಟುಕಥೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದರು.
ಚಂದ್ರಶೇಖರ್ ಅವರ ಪತ್ರಕ್ಕೆ ಭಾನುವಾರ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, “ಚಂದ್ರಶೇಖರ್ ಅಧಿಕಾರಿಯ ಸೋಗಿನಲ್ಲಿ ಕ್ರಿಮಿನಲ್ ಆಗಿದ್ದು, ಅವರ ವಿರುದ್ಧ ಸರಣಿ ಅಪರಾಧ ಎಸಗಿರುವ ಆರೋಪವಿದೆ,” ಎಂದು ಹೇಳಿದ್ದಾರೆ.
ಚಂದ್ರಶೇಖರ್ ಅವರ ಪತ್ರದಲ್ಲಿ, “ಎಸ್ಐಟಿ ಆರೋಪಿಗೆ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರು ಮಾಡುವಂತೆ ಕೋರಿತ್ತು ಮತ್ತು ಅವರು ಜಾಮೀನಿನಲ್ಲಿದ್ದರು. ನಮ್ಮ ಕರ್ತವ್ಯವನ್ನು ನಿಭಾಯಿಸದಂತೆ ನಮ್ಮನ್ನು ತಡೆಯಲು ಕುಮಾರಸ್ವಾಮಿ ಈ ರೀತಿ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಅವರ ಉದ್ದೇಶವಾಗಿದೆ. ಆದರೆ ಒಬ್ಬ ಆರೋಪಿ, ಎಷ್ಟೇ ಉನ್ನತ ಮತ್ತು ಶಕ್ತಿಶಾಲಿಯಾಗಿದ್ದರೂ, ಆತ ಆರೋಪಿಯೆ ಆಗಿದ್ದಾನೆ” ಎಂದು ಹೇಳಿದ್ದಾರೆ.
2006ರಿಂದ 2007ರ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಗಣಿ ಗುತ್ತಿಗೆ ನೀಡಿಕೆಯಲ್ಲಿನ ಅಕ್ರಮಗಳ ಕುರಿತು ಐಪಿಎಸ್ ಅಧಿಕಾರಿಯಾಗಿರುವ ಚಂದ್ರಶೇಖರ್ ಅವರು ತನಿಖೆ ನಡೆಸುತ್ತಿದ್ದಾರೆ. ಈ ವರ್ಷದ ಆಗಸ್ಟ್ನಲ್ಲಿ ಅವರ ಅಧೀನದಲ್ಲಿರುವ ಎಸ್ಐಟಿ ಕೇಂದ್ರ ಸಚಿವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಹೆಚ್ಚುವರಿ ದಾಖಲೆಗಳನ್ನು ಕೋರಿತ್ತು.
ಚಂದ್ರಶೇಖರ್ ವಿರುದ್ಧ ಕಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ಪ್ರತಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ ಮರುದಿನ ಚಂದ್ರಶೇಖರ್ ಅವರು ಈ ಪತ್ರ ಬರೆದಿದ್ದಾರೆ. ಚಂದ್ರಶೇಖರ್ ಅವರು “ಅಕ್ರಮ ನಿರ್ಮಾಣ ಮತ್ತು ಅತಿಕ್ರಮಣ” ದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರೆ.