ರೇಷ್ಮೆ ಗೂಡಿನ ಬೆಲೆ ದಿಢೀರನೆ ಕುಸಿತ ಕಂಡಿದ್ದು ದ್ವಿತಳಿಯ ಗೂಡಿಗೆ ಪ್ರತಿ ಒಂದು ಕೆ.ಜಿಗೆ ₹ 800 ರಿಂದ ₹ 900 ಇದ್ದ ಬೆಲೆ ಈಗ ₹500 ರಿಂದ ₹600ಕ್ಕೆ ಕುಸಿತವಾಗಿದ್ದು, ಸಿ.ಬಿ ಗೂಡಿಗೆ ₹600 ರಿಂದ ₹700 ಇದ್ದ ಬೆಲೆ ಈಗ ₹300 ರಿಂದ ₹400 ರೂ.ಗಳಿಗೆ ಇಳಿಕೆ ಆಗಿದ್ದು, ಕೂಡಲೇ ಸರ್ಕಾರ ರೇಷ್ಮೆ ಬೆಳೆಗಾರರ ರಕ್ಷಣೆಗಾಗಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ಸಂಕಷ್ಟದಿಂದ ಕಂಗಾಲಾಗಿದ್ದಾರೆ. ರೇಷ್ಮೆ ಬೆಳೆಯನ್ನೆ ನಂಬಿ ಎಷ್ಟೋ ಕುಟುಂಬದ ಯುವಕರು ಪಟ್ಟಣದಿಂದ ವಲಸೆ ಬಂದು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಕೊಂಡಿದ್ದರು. ಈಗ ಅವರು ಬೀದಿಗೆ ಬೀಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೂಲು ಬಿಚ್ಚಾಣಿಕೆದಾರರ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಪ್ರತಿ ಕೆ.ಜಿ ನೂಲಿಗೆ ₹ 8000 ದಿಂದ ₹9000 ಇದ್ದ ಬೆಲೆ ₹3000- ₹4000ಕ್ಕೆ ಕುಸಿತಗೊಂಡಿದೆ. ಇದ್ದರಿಂದ ನೂಲು ಬಿಚ್ಚಾಣಿಕೆದಾರರ ಕುಟುಂಬವು ಸಹ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರವು ಕೂಡಲೇ ರೇಷ್ಮೆ ಬೆಳೆಗಾರ ಮತ್ತು ನೂಲು ಬಿಚ್ಚಾಣಿಕೆದಾರರ ಕಷ್ಟಕ್ಕೆ ಸ್ಪಂದಿಸಿ ಪ್ರತಿ ಒಂದು ಕೆ.ಜಿ ದ್ವಿತಳಿಯ ಗೂಡಿಗೆ ₹800-₹900 ರೂ. ಮತ್ತು ಸಿ.ಬಿ ಗೂಡಿಗೆ ₹600-₹700 ರೂ. ಕನಿಷ್ಠ ಬೆಲೆ ನಿಗದಿ ಮಾಡಿ ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ಕೂಡಲೇ ಪರಿಹರಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷ್ಮೆ ಬೆಳೆಗಾರರ ನೆರವಿವೆ ಧಾವಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಚನ್ನಪ್ಪ, ಮರಿಸ್ವಾಮಿ, ಪುಟ್ಟೇಗೌಡ, ಪ್ರಕಾಶ್ ಹಾಗೂ ಅಪ್ಪಾಜಿ ಉಪಸ್ಥಿತರಿದ್ದರು.