ಎರಡು ದಿನಗಳಿಂದ ಸ್ವಾತಿ ನಕ್ಷತ್ರದ ಮಳೆಯು ಪ್ರಾರಂಭವಾಗಿ ನವೆಂಬರ್ 5ನೇ ತಾರೀಖಿನವರೆಗೂ ಸುರಿಯಲಿದೆ. ನಮ್ಮ ಪೂರ್ವಿಕರು ಈ ಮಳೆಯ ನೀರನ್ನು ಸಂಗ್ರಹಿಸಿ ಬೆಳೆಗಳಿಗೆ ರೋಗ ಬಾರದೇ ಇರಲು 1:10 ಅಳತೆಯಲ್ಲಿ ಈ ನೀರನ್ನು ಸಿಂಪರಣೆ ಮಾಡುತ್ತಿದ್ದರು.
ಸಣ್ಣ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ 8ಕ್ಕೆ ಮತ್ತು ಸಂಜೆ ಎರಡು ಚಮಚ ನೀರು ಕುಡಿಸಿದಾಗ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಉಲ್ಲೇಖವಿದೆ. ಹಾಗೂ ಹಳೆಯ ಗಾಯಗಳಿಗೆ ಔಷಧಿಯಾಗಿ ಬಳಸುತ್ತಿದ್ದರು. ಈ ನೀರಿನಿಂದ ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.
ಜಾನುವಾರುಗಳಿಗೆ ಗಾಯವಾದಾಗ, ಉಣ್ಣೆಗಳು ಹೆಚ್ಚಿದಾಗ ಸಂಗ್ರಹಿಸಿಟ್ಟ ಸ್ವಾತಿ ಮಳೆಯ ನೀರಿನಿಂದ ಮೈ ತೊಳೆದರೆ ಮತ್ತೆ ಎತ್ತಿನ ಮೈ ಕಳೆಗಟ್ಟುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಹಾಗಾಗಿ ಉಚಿತವಾಗಿ ದೊರಕುವ ಸ್ವಾತಿ ಮಳೆಯ ನೀರನ್ನು ತಾಮ್ರದ ಹಂಡೆ ಅಥವಾ ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಿ ಬಳಸೋಣ. ಗಾಳಿಯಾಡದಂತೆ ಸಂರಕ್ಷಿಸಿದರೆ ಹಲವು ವರ್ಷಗಳವರೆಗೆ ಈ ಸ್ವಾತಿ ಮಳೆ ನೀರು ಕೆಡುವುದಿಲ್ಲ.
ಪ್ರಕೃತಿ ನಮಗೆ ಕೊಡುವ ಉಚಿತ ಭಾಗ್ಯಗಳಲ್ಲಿ ಈ ಸ್ವಾತಿ ಮಳೆಯೂ ಒಂದು. ಹುಳ್ಳಿ ಚೆಲ್ಲಿದ ರೈತರು ಇಳುವರಿಗಾಗಿ, ಈ ಸ್ವಾತಿ ಮಳೆಗಾಗಿ ತಾಯಿ ಚಾಮುಂಡಿಗೆ ಕೈಮುಗಿಯುವ ಪರಿಪಾಠ ಹಿಂದಿನಿಂದಲೂ ಹಳೇ ಮೈಸೂರು ಭಾಗದ ರೈತರಲ್ಲಿ ಇದೆ. ಅಲಕೆರೆಯ ರೈತರ ಶಾಲೆಯ ಸದಸ್ಯರು ಸ್ವಾತಿ ಮಳೆ ನೀರಿನ ಪ್ರಯೋಗ, ಪ್ರಾತ್ಯಕ್ಷಿಕೆಗೆ ಮುಂದಾಗುತ್ತಿದ್ದಾರೆ. ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ.
ಈಗ ಮಳೆ ನೀರು ಸಂಗ್ರಹ ಮಾಡಿಕೊಳ್ಳಿ. ಮಕ್ಕಳು, ಜಾನುವಾರುಗಳು ಈ ಮಳೆಯಲ್ಲಿ ನೆನೆಯುವುದರಿಂದಲೂ ಪ್ರಯೋಜನಗಳಿವೆ. ಈ ಮುತ್ತಿನ ಮಳೆಯನ್ನು ಪ್ರಾಣಿ ಪಕ್ಷಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತವೆ. ನಾವು ಜಾಣ ಮನುಷ್ಯರು ಹಿಂದೆ ಬೀಳಬಾರದಲ್ಲವೇ..
ಪ್ರೊ. ಸತ್ಯಮೂರ್ತಿ
ಮುಖ್ಯಸ್ಥರು, ರೈತರ ಶಾಲೆ, ಮಂಡ್ಯ
ಸೂಚನೆ: ನ.6ರ ನಂತರ ಸುರಿವ ಮಳೆ ಜೀವ ಮತ್ತು ಸಸ್ಯಸಂಕುಲಕ್ಕೆ ಮಾರಕವಾಗಿದ್ದು,ಸಂಗ್ರಹಿಸಬಾರದಾಗಿ ವಿನಂತಿ