ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು,ನೀನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ದಾಖಲೆ ಇಟ್ಟುಕೊಂಡು ಮಾತನಾಡು.ಕ್ಷೇತ್ರದ ಅಭಿವೃದ್ಧಿ ಮಾಡದ ನೀನು ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿದೆಯಾ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಶಾಸಕ ಅನ್ನದಾನಿ ವಿರುದ್ಧ ಹರಿಹಾಯ್ದರು.
ಮಳವಳ್ಳಿ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕಾರಾದ ರಾಜೀವ್ ಗಾಂಧಿ ಹಾಗೂ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕನಕ ಭವನ,ಗಂಗಾಮತಸ್ಥ ಮ,ವಿಶ್ವಕರ್ಮ,ಉಪ್ಪಾರ ಭವನಕ್ಕೆ ಎಷ್ಟು ಅನುದಾನ ಕೊಟ್ಟಿದ್ದೆ ಎನ್ನುವ ಬಗ್ಗೆ ಶಾಸಕ ಅನ್ನದಾನಿ ನನ್ನ ಕೇಳುವ ಅಗತ್ಯವಿಲ್ಲ.ಶಾಸಕನಾಗಿ ಒಂದೇ ಒಂದು ಯೋಜನೆ ತರದ ಇಂತಹವರಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡ್ಯಾನ್ಸ್ ಮಾಡಿದ್ದೇ ಸಾಧನೆ
ಶಾಸಕ ಅನ್ನದಾನಿ ಮಳವಳ್ಳಿ ಕ್ಷೇತ್ರಕ್ಕೆ ನಾನು 2008-2018 ರವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ತಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೋಲಿಕೆ ಮಾಡಲಿ, ಆಗ ಗೊತ್ತಾಗುತ್ತದೆ ಯಾರು ಏನು ಮಾಡಿದರು ಅಂತ.ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಯೋಗ್ಯತೆ ಅನ್ನದಾನಿಗಿಲ್ಲ.
ಕೊರೊನಾ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿದ್ದು,ಹಬ್ಬ- ಹರಿದಿನಗಳಲ್ಲಿ ಹಾಡು,ನಾಟಕ ಮಾಡ್ಕೊಂಡು, ತೂರಾಡ್ಕಂಡ್ ಹೋಗಿದ್ದೇ ಈತನ ಸಾಧನೆ ಎಂದು ಕಿಡಿಕಾರಿದರು.
ಒಂದು ಯೋಜನೆ ತೋರಿಸಲಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ತಂದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತ ಪಡೆಯಲಿ.ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು,ಒಬ್ಬ ಶಾಸಕನಾಗಿ ಮಳವಳ್ಳಿ ಕ್ಷೇತ್ರಕ್ಕೆ ಒಂದೇ ಒಂದು ಯೋಜನೆಗೆ ಸಚಿವ ಸಂಪುಟ ಅನುಮೋದನೆ ಮಾಡಿದ ಬಗ್ಗೆ ತೋರಿಸಲಿ ಎಂದು ಸವಾಲು ಹಾಕಿದರು.
ಪೂಜೆ ಮಾಡೋದೇ ಕೆಲಸ
ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಗೆ 28 ಬಾರಿ ಪೂಜೆ ಮಾಡೋದೆ ಅವರ ಕೆಲಸ.ಒಂದು ಮೀಟರ್ ಪೈಪಿಗೆ 150 ರೂ.ಹೆಚ್ಚಿಗೆ ಹಣ ಬಿಲ್ ಮಾಡಲಾಗಿದೆ.ಲಕ್ಷಾಂತರ ಮೀಟರ್ ಪೈಪಿನಲ್ಲಿ ಎಷ್ಟು ಹಣ ಹೊಡೆದಿದ್ದೀರಿ ಎಂಬುದು ಗೊತ್ತಿದೆ.
ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿಸಿದ ನೀನು ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯಾ ಎಂದು ಟೀಕಿಸಿದರು.
ನಾಚಿಕೆ ಆಗೋಲ್ವ
ಕುಮಾರಸ್ವಾಮಿ ಅವರ ಮಗ ಸೋಲಲು ಕಾರಣನಾದ ಅನ್ನದಾನಿ ಈಗ ಕುಮಾರಸ್ವಾಮಿ ಅವರ ಜೊತೆ ಕೂತು ಸುಳ್ಳು ಹೇಳಿಸುವ ಕೆಲಸ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣನಾದವನು, ಕುಮಾರಸ್ವಾಮಿಗೆ ಅವಮಾನ ಮಾಡಿದವನು ಈಗ ಅವರ ಜೊತೆ ಕುಳಿತು ಸುಳ್ಳು ಹೇಳಿಸಲು ನಾಚಿಕೆ ಆಗೋಲ್ವಾ ಎಂದು ವಾಗ್ದಾಳಿ ನಡೆಸಿದರು.
ತಳಬುಡ ಇಲ್ಲದೆ ಮಾತನಾಡುವ ಅನ್ನದಾನಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ.ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನ್ನ ವಿರುದ್ಧ ಮಾತನಾಡಲು ಶಾಸಕರಿಗೆ ನೈತಿಕತೆ ಇಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್ ರಾಜು ಉಪಸ್ಥಿತರಿದ್ದರು.