ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಶ್ರಮಿಕ ಶಕ್ತಿ ವಿದ್ಯಾರ್ಥಿ ಸಂಘಟನೆಗಳ ಆಶ್ರಯದಲ್ಲಿ ಮಂಡ್ಯದಲ್ಲಿ ಇಂದು ‘ಶ್ರಮಿಕರ ಮ್ಯಾರಥಾನ್’ ನಡೆಸಲಾಯಿತು.
ಮಂಡ್ಯನಗರದ ಸಂಜಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಕರ್ನಾಟಕ ಜನಶಕ್ತಿಯ ಸಿದ್ದರಾಜು, “ನಾವು ಆರಿಸಿ ಗೆಲ್ಲಿಸಿದ ಜನ ಪ್ರತಿನಿಧಿಗಳು ನಮ್ಮ ಕಡೆ ತಿರುಗಿಯೂ ನೋಡುತ್ತಿಲ್ಲ. ಭೂಮಿ ವಸತಿ ವಂಚಿತರಿಗೆ ನೆಲ ಮತ್ತು ನೆಲೆ ದಕ್ಕುವುದೆಂದು? ಇಂತವರನ್ನು ನಾವು ಮತ್ತೆ ಯಾವುದೇ ಕಾರಣಕ್ಕೂ ಮತ್ತೆ ಗೆಲ್ಲಿಸಬಾರದು” ಎಂದು ತಿಳಿಸಿದರು.
ಮಂಡ್ಯದ ಶ್ರಮಿಕ ನಗರಗಳಲ್ಲಿ ಕಳೆದ ಮೂರು ತಲೆಮಾರುಗಳಿಂದ ತುಂಡು ನೆಲ ಇಲ್ಲದೆ ಸಾವಿರಾರು ಜನ ಬದುಕುತ್ತ ಇದ್ದಾರೆ. ಗೆದ್ದ ಶಾಸಕರು ಇಲ್ಲವೇ ಮಂತ್ರಿಗಳನ್ನು ನಾವು ಹಿಡಿದು ನಿಲ್ಲಿಸಿ ಕೇಳಬೇಕು. ಒಂದೇ ಕೋಣೆಯಂತ ಮನೆಯಲ್ಲಿ ಮೂರು ನಾಲ್ಕು ತಲೆಮಾರಿನ ಜನ ಬದುಕಲು ಸಾಧ್ಯವೇ. ಮೊದಲು ಬಡ ಜನರಿಗೆ ಮನೆ ಕೊಡಿ ಅಂತ ಕೇಳಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಭೂಮಿ ವಸತಿ ಹಕ್ಕು ವಂಚಿತರ ಸಮಿತಿಯ ಸದಸ್ಯರಾದ ಕಂದೇಗಾಲ ಶ್ರೀನಿವಾಸ್, “ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಘನತೆಯಿಂದ ಬದುಕಲು ತುಂಡು ಭೂಮಿಯನ್ನು ಕೊಡದ ಸರ್ಕಾರ ಇದ್ದರೇನು ಇಲ್ಲದಿದ್ದರೇನು. ಯಾವುದೇ ಧರ್ಮ, ಜನಾಂಗದವರಾದರು ಮೊದಲು ವಸತಿ ಆಶ್ರಯ ಇರಬೇಕು. ಊಟ, ಶಿಕ್ಷಣ ಇರಬೇಕು. ಇವು ಮೂಲಭೂತ ಸೌಲಭ್ಯಗಳು ಸರ್ಕಾರ ಕನಿಷ್ಠ ಇವುಗಳನ್ನಾರು ಕೊಡಬೇಕು. ಎಲ್ಲಾ ಜನರಿಗೆ ಘನತೆಯಿಂದ ಬದುಕಬೇಕು ಎಂದರೆ ತುಂಡು ನೆಲ ಸಿಗಬೇಕು” ಎಂದು ಒತ್ತಾಯಿಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, “ಇವತ್ತು ದೇವರಾಜ ಅರಸು ರವರ ಜನ್ಮ ದಿನ. ಅವರ ಕನಸು ಉಳುವವನೇ ನೆಲದೊಡೆಯ ಅನ್ನುವುದು ಆಗಿತ್ತು. ಸಾವಿರಾರು ರೈತರಿಗೆ ಭೂಮಿಯನ್ನು ಹಂಚಿದ್ದರು. ಆದರೆ ಈಗಿನ ಸರಕಾರ ಜನರ ಬಳಿ ಇರುವ ನೆಲವನ್ನೇ ಕಸಿದುಕೊಳ್ಳುತ್ತಿದೆ. 78ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಶ್ರಮಿಕ ನಗರದ ಜನರು ಇಲ್ಲ. ಅವರಿಗೆ ಬದುಕಲು ತುಂಡು ನೆಲ ಇಲ್ಲ. ಆದ್ದರಿಂದ ನಿಮ್ಮ ಸ್ವಾತಂತ್ರ್ಯ ಸಂಭ್ರಮದಲ್ಲಿ ಇಲ್ಲ. ಓದಿದ ಯುವಕರಿಗೆ ಕೆಲಸ ಕೊಡದೆ ಸಾರಾಯಿ, ಗಾಂಜಾ ಕೊಟ್ಟು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನಿಮ್ಮ ಸ್ವಾತಂತ್ರ್ಯ ಸಂಭ್ರಮದಲ್ಲಿ ನಾವಿಲ್ಲ. ನಮಗೆ ವಸತಿ, ಮನೆ ಹಾಗೂ ಮೂಲಭೂತ ಸೌಕರ್ಯಗಳ ಕೊಡೆದೆ ಇದ್ದರೆ ಮುಂದಿನ ದಿನಗಳಲ್ಲಿ ಓಟನ್ನು ಹಾಕದೆ ಸರಕಾರಕ್ಕೆ ಬುದ್ದಿ ಕಲಿಸಬೇಕಾಗುತ್ತದೆ” ಎಂದು ಹೇಳಿದರು.
ಭದ್ರತೆ ಸಿಗಬೇಕು. ಶ್ರಮಿಕ ನಗರಗಳಲ್ಲಿ ಅತ್ಯಾಚಾರ, ಹಲ್ಲೆಗಳು ನಡೆಯದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸ್ಲಂಗಳ ಯುವಕರು ಮಾದಕ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿಯೂ ಕ್ರಮ ವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು.
ಶ್ರಮಿಕಶಕ್ತಿ ವಿದ್ಯಾರ್ಥಿ ಸಂಫಟನೆಯ ಯುವಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ್, “ಜಿಲ್ಲಾಡಳಿತ ಶ್ರಮಿಕರ ಜೊತೆಗೆ ನಿಲ್ಲಲಿದೆ. ತಾಂತ್ರಿಕ ಕಾರಣಗಳಿಗಾಗಿ ಕೆಲವು ಕೆಲಸಗಳು ನಿಧಾನವಾಗಿವೆ. ಮೂರು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಶೀಘ್ರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ವೇಳೆ ವಕೀಲರಾದ ಬಿ.ಟಿ.ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ನುಡಿ ಕರ್ನಾಟಕದ ನಾಗೇಶ್, ರೈತ ಸಂಘದ ಲತಾ ಶಂಕರ್, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪವಿತ್ರ, ಮಹಿಳಾ ಮುನ್ನಡೆ ಸಂಘಟನೆಯ ಶಿಲ್ಪ, ಅಂಜಲಿ, ಕರ್ನಾಟಕ ಜನಶಕ್ತಿಯ ವೈದುನ, ಚಂದ್ರು, ಮದ್ದೂರು ತಮಿಳು ಕಾಲೋನಿಯ ರವಿ, ಪೊನ್ನುಸ್ವಾಮಿ, ವೀರಮ್ಮ, ಲಕ್ಷ್ಮಿ, ಶಾಂತಿ, ಮಂಜುಳಾ, ಗುಡಿಗೆರೆಯ ಪ್ರಸಾದ್ ಹಾಗೂ ಮಂಡ್ಯ ಜಿಲ್ಲೆಯ ಶ್ರಮಿಕ ನಿವಾಸಿಗಳು ಉಪಸ್ಥಿತರಿದ್ದರು.