ಕಾಲೇಜು ವಿದ್ಯಾರ್ಥಿನಿಯರಿಗೆ ಉಪನ್ಯಾಸಕರೇ ಮದ್ಯ ಕುಡಿಸಿ, ಡಾನ್ಸ್ ಮಾಡುವಂತೆ ಕಿರುಕುಳ ನೀಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ. ಮೂವರು ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಲ್ಲಿಯೇ ಘಟನೆ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕನಕಪುರದ ರೂರಲ್ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರರಾದ ವಿಶ್ವನಾಥ್, ಲಕ್ಷ್ಮೀಶ್ ಹಾಗೂ ನಾಗೇಶ್ ಎಂಬವರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಅಕ್ಟೋಬರ್ 09ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಅಕ್ಟೋಬರ್ 5ರಿಂದ 10ರವರೆಗೆ ಮಡಿಕೇರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ, ಪ್ರಾಂಶುಪಾಲರೂ ಸೇರಿದಂತೆ ಉಪನ್ಯಾಸಕರು ಮದ್ಯ ಸೇವಿಸಿದ್ದಾರೆ. ಬಳಿಕ, ಮೂವರು ನಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿಹಾಕಿಕೊಂಡು ಅವರಿಗೂ ಬಲವಂತವಾಗಿ ಬಿಯರ್ ಕುಡಿಸಿದ್ದಾರೆ. ನಂತರ, ಡಾನ್ಸ್ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಸದಿಂದ ಮರಳಿದ ಬಳಿಕ ಪ್ರವಾಸದಲ್ಲಿ ನಡೆದ ಘಟನೆಯ ಬಗ್ಗೆ ಕಾಲೇಜಿನ ಮಹಿಳಾ ಉಪನ್ಯಾಸಕರ ಬಳಿ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಅಳಲನ್ನು ಗಂಭೀರವಾಗಿ ಪರಿಗಣಿಸದ ಉಪನ್ಯಾಸಕಿಯರು ‘ಕಾಲೇಜು ಅಂದ ಮೇಲೆ ಇದೆಲ್ಲ ಕಾಮನ್ ಎಂಬ ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ, ವಿದ್ಯಾರ್ಥಿನಿಯರು ಮಕ್ಕಳಾ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಆರೋಪಿತಉಪನ್ಯಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ. ಪ್ರಕರಣದ ತನಿಖೆ ನಡೆಸಿ ಏಳು ದಿನದೊಳಗೆ ವರದಿ ಸಲ್ಲಿಸುವಂತೆಯೂ ನಿರ್ದೇಶಿಸಿದೆ.