ಮಂಡ್ಯ ಜಿಲ್ಲೆಯಲ್ಲಿ ಮಾನವೀಯತೆಯ ರಕ್ತದಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಹೇಳಿದರು.
ಮಂಡ್ಯ ನಗರದ ಮಿಮ್ಸ್ ರಕ್ತನಿಧಿ ಕೇಂದ್ರದ ಆವರಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷನಲ್ ಹಾಗೂ 20ಕ್ಕೂ ಹೆಚ್ಚು ಅಲಯನ್ಸ್ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ “ಸ್ವಯಂ ಪ್ರೇರಿತ ರಾಷ್ಟ್ರೀಯ ರಕ್ತದಾನಿ”ಗಳ ದಿನ ಅಂಗವಾಗಿ ರಕ್ತದಾನ ಮತ್ತು ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಅಭಿನಂದನೆ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರಕ್ತದಾನಿಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ, ಅಗತ್ಯವುಳ್ಳವರಿಗೆ ತಕ್ಷಣವೇ ರಕ್ತ ನೀಡುವ ಸೇವಾ ಮನೋಭಾವದ ರಕ್ತದಾನಿಗಳಿದ್ದಾರೆ ಎಂದು ನುಡಿದರು.
ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, 1901ರಲ್ಲಿ ರಕ್ತ ವರ್ಗಿಕರಣ ಪಿತಾಮಹ ಕಾರ್ಲ್ ಲಾಂಡ್ ಸ್ಪೈನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ ಗುಂಪುಗಳ ವರ್ಗಿಕರಣ ಕಂಡು ಹಿಡಿದರು. ಇಂತಹ ಮಹಾಸಾಧನೆಯಿಂದ ಸಾಕಷ್ಟು ಜೀವಗಳು ಉಳಿಯುವಂತಾಗಿದೆ, ಇಂತಹ ವಿಜ್ಞಾನಿಗೆ ನೋಬಲ್ ಪುರಸ್ಕಾರವು ಲಭ್ಯವಾಗಿದೆ ಎಂದು ಸ್ಮರಿಸಿದರು.
ಜೂ. 14ರಂದು “ವಿಶ್ವ ರಕ್ತದಾನಿಗಳ ದಿವಸ”, ಭಾರತದೇಶದಲ್ಲಿ ಅ.1ರಂದು ರಾಷ್ಟ್ರೀಯ ರಕ್ತದಾನ ದಿನ ಎಂದು ಆಚರಿಸಲಾಗುತ್ತಿದೆ, ಅಗತ್ಯವಿರುವ ರೋಗಿಗಳ ತುರ್ತು ಸಮಯದಲ್ಲಿ ಸ್ವಯಂಪ್ರೇರಿತ ರಕ್ತದಾನದ ಗುರಿಯನ್ನು ಇರಿಸಿಕೊಳ್ಳಲಾಗಿದೆ, ರಕ್ತ ಸಂಗ್ರಹಿಸಿ ಸರಬರಾಜು ಮಾಡುವ ವ್ಯವಸ್ಥೆ ರೂಪಿತಗೊಂಡಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಕ್ತದಾನಿಗಳ ಗ್ರಾಮಗಳನ್ನಾಗಿ ರೂಪಿಸುವ ಸಂಕಲ್ಪವಾಗಬೇಕಿದೆ, 200ರಿಂದ 300 ಮಂದಿ ರಕ್ತದಾನಿಗಳನ್ನು ಸ್ವಯಂ ಪ್ರೇರಿತರನ್ನಾಗಿ ತಯಾರು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶೇಷವಾಗಿ ಅಪರೂಪದ ರಕ್ತ ಗುಂಪಿನ ಹಲವು ಮಂದಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಅತಿ ಹೆಚ್ಚು ರಕ್ತದಾನ ಮಾಡಿರುವ ರಕ್ತದಾನಿಗಳನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷನಲ್ ನಿರ್ದೇಶಕ ಡಾ.ನಾಗರಾಜು ವಿ.ಬೈರಿ, ಮಿಮ್ಸ್ ನಿರ್ದೇಶಕ ಡಾ.ನರಸಿಂಹ ಸ್ವಾಮಿ, ನೆಲದನಿ ಬಳಗದ ಗೌರವಾಧ್ಯಕ್ಷೆ ರುಕ್ಮಿಣಿ, ವಿಕಲಚೇತನರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಅಲಯನ್ಸ್ ಸಂಸ್ಥೆಯ ವೈ.ಎಚ್.ರತ್ಮಮ್ಮ ಮತ್ತಿತರರು ಹಾಜರಿದ್ದರು.