ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹೊಸಹೊಳಲು ಪ್ರಾಥಮಿಕ ಪತ್ತಿನ ಸಹಕಾರ ಸಂಘವು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ₹25,08,402 ಹಣಕ್ಕೆ ಕೇಂದ್ರ ಆದಾಯ ತೆರಿಗೆ ಇಲಾಖೆಯು ₹10.57 ಲಕ್ಷ ರೂಪಾಯಿ ತೆರಿಗೆ ವಿಧಿಸಿತ್ತು. ಇದರ ವಿರುದ್ದ ಕಾನೂನು ಹೋರಾಟ ನಡೆಸಿದ ಪರಿಣಾಮ ಆದಾಯ ತೆರಿಗೆ ನ್ಯಾಯಾಲಯವು ₹10.57 ಲಕ್ಷ ತೆರಿಗೆ ಆದೇಶವನ್ನು ರದ್ದು ಮಾಡಿ ತೀರ್ಪು ನೀಡಿದೆ ಎಂದು ಮಂಡ್ಯ ಜಿಲ್ಲಾ ಸಹಕಾರಿಗಳ ವೇದಿಕೆ ಟ್ರಸ್ಟ್ ಕಾರ್ಯದರ್ಶಿ ಕೌಡ್ಲೆ ಚನ್ನಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ್ನು ವಾಣಿಜ್ಯ ಬ್ಯಾಂಕೆಂದು ಪರಿಗಣಿಸಿ, ಅಲ್ಲಿ ಠೇವಣಿ ಇಟ್ಟಿದ್ದ ಹಣದ ಮೇಲೆ ಆದಾಯ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಕೃಷಿ ಸಹಕಾರ ಬ್ಯಾಂಕುಗಳಿಂದ ಹಣ ವಸೂಲಿಗೆ ಮುಂದಾಗಿತ್ತು. ಆದರೆ ಚಾರ್ಟಡ್ ಅಕೌಂಟೆಂಟ್ ಶಂಕರೇಗೌಡ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯಿಂದ ಸಹಕಾರ ಸಂಘವು ತೆರಬೇಕಾಗಿದ್ದ 10.57 ಲಕ್ಷ ರೂ. ಉಳಿತಾಯವಾಗಿದೆ ಎಂದು ವಿವರಿಸಿದರು.
ಮಂಡ್ಯ ಜಿಲ್ಲೆಯಲ್ಲಿ 243 ವ್ಯವಸಾಯ ಸಹಕಾರ ಸಂಘಗಳು ,1200 ಹಾಲು ಉತ್ಪಾದಕರ ಸಹಕಾರ ಸಂಘಗಳು, 272 ನೀರು ಬಳಕೆದಾರರ ಸಹಕಾರ ಸಂಘಗಳು ಹಾಗೂ 460 ವಿವಿಧ ಸಹಕಾರ ಸಂಘಗಳಿದ್ದು, ಆದರೆ ಈ ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ಹೇರಲು ಅವಕಾಶವಿಲ್ಲ, ಪ್ರಸ್ತುತ ನ್ಯಾಯಾಲಯವು ಹೊರಡಿಸಿರುವ ಆದೇಶವು ಎಲ್ಲಾ ಸಂಘಗಳಿಗೂ ಅನ್ವಯವಾಗಲಿದೆ ಎಂದರು.
ಚಾರ್ಟಡ್ ಅಕೌಂಟೆಂಟ್ ಶಂಕರೇಗೌಡ, ಎಂ ಡಿ ಸಿ ಸಿ ಬ್ಯಾಂಕಿನಲ್ಲಿ ಸಹಕಾರ ಸಂಘವು ಇಟ್ಟಿದ್ದ ಠೇವಣಿಗೆ ತೆರಿಗೆ ವಿಧಿಸಿದ್ದು, ಅವೈಜ್ಞಾನಿಕವಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಸಹಕಾರ ಸಂಘಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಸಹಕಾರಿಗಳ ವೇದಿಕೆ ಟ್ರಸ್ಟ್ ಅಧ್ಯಕ್ಷ ಹೆಚ್ ಸಿದ್ದಯ್ಯ , ವಕೀಲ ದೊರೆಸ್ವಾಮಿ ಉಪಸ್ಥಿತರಿದ್ದರು.