ಕೊರೋನಾದ ನೆಪವೊಡ್ಡಿ ಕಳೆದ 5 ವರ್ಷ ಗಳಿಂದ ಶುಲ್ಕಹೆಚ್ಚಳವಾಗಿಲ್ಲವೆಂದು, ಈ ವರ್ಷ ಶುಲ್ಕ ಹೆಚ್ಚಿಸಬೇಕೆಂದು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಆಯುಷ್ ವೈದ್ಯಕೀಯ ಮಹಾ ವಿದ್ಯಾಲಯಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆಯನ್ನುಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ( ಎಐಡಿಎಸ್ಓ) ತೀವ್ರವಾಗಿ ಖಂಡಿಸಿದೆ.
ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಅಡಿಯಲ್ಲಿ ಬರುವ ಕೋರ್ಸ್ ಶುಲ್ಕವನ್ನು ₹60,000 ದಿಂದ ₹75000 ಕ್ಕೆ ಏರಿಸಲಾಗಿದೆ. ಈ ರೀತಿ ಏಕಾಏಕಿ ಶೇ.25 ರಷ್ಟು ಹೆಚ್ಚಿಸಿ ಶುಲ್ಕ ಹೆಚ್ಚಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣದ ಕನಸಿಗೆ ತಣ್ಣೀರೆರಚಿರುವುದು ಸರ್ಕಾರದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಐಡಿಎಸ್ಒ ಜಿಲ್ಲಾ ಸಂಚಾಲಕಿ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸಾಮಾನ್ಯರಿಗೆ ಇದು ಗಾಯದ ಮೇಲೆ ಬರೆ ಎಳೆದಂತಿದೆ. ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ನೆರವಾಗಬೇಕಾದ ಸರ್ಕಾರವು, ಖಾಸಗಿ ಲಾಭಿಗಳ ಒತ್ತಡಕ್ಕೆ ಮಣಿದು ಶುಲ್ಕ ವನ್ನು ಹೆಚ್ಚಿಸಿರುವುದು ನಾಚಿಕೆಗೇಡಿನ ಸಂಗತಿ. ಈ ಹಿನ್ನೆಲೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಈ ಶುಲ್ಕ ಹೆಚ್ಚಳವನ್ನು ಈ ಕೂಡಲೇ ರಾಜ್ಯ ಸರ್ಕಾರವು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.